ಪದ್ಯ ೩೩: ಪಾಂಡವರ ಕೌರವರ ಸೈನ್ಯದ ಸ್ಥಿತಿ ಹೇಗಿತ್ತು?

ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ (ಕರ್ಣ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವ ಕೌರವರ ಸೈನ್ಯವು ಹಿಂದಿರುಗಿತು. ಪಾಂಡವರು ಗೆದ್ದ ಸಂತೋಷದಿಂದ ಬೊಬ್ಬೆಯಿಟ್ಟರು, ಕೌರವರು ಸೋತ ದುಃಖದಿಂದ ತಲೆತಗ್ಗಿಸಿದರು. ಜಯದ ಆರ್ಭಟೆಯಿಂದ ಅವರು ಸಂತೋಷಗೊಂಡರು. ಒದೆ ತಿಂದು ಇವರು ದುಃಖಿತರಾದರು. ಪಾಂಡವರು ವಿಜಯದಿಂದ ರೋಮಾಂಚನಗೊಂಡರು, ಇವರು ಸೋತು ಕಣ್ಣಿರಿಟ್ಟರೆಂದು ವೈಶಂಪಾಯನರು ಭಾರತದ ಕಥೆಯನ್ನು ತಿಳಿಸುತ್ತಿದ್ದರು.

ಅರ್ಥ:
ಬೊಬ್ಬೆ: ಜೋರಾದ ಶಬ್ದ; ದುಗುಡು: ದುಃಖ; ಭಾರ: ಹೊರೆ; ತಲೆ: ಶಿರ; ತಲೆಗುತ್ತು: ತಲೆ ತಗ್ಗಿಸು; ಉಬ್ಬಾರ: ಸಂಭ್ರಮ, ಹಿಗ್ಗು; ಭುಲ್ಲವಿಸು: ಉತ್ಸಾಹಗೊಳ್ಳು; ವಿಘಾತ: ನಾಶ, ಧ್ವಂಸ; ಪೂರವಿಸು: ತುಂಬು; ಪುಳಕ: ರೋಮಾಂಚನ; ದೃಗುವಾರಿ: ಕಣ್ಣೀರು; ಪೂರದ:ತುಂಬ; ಅಖಿಳ: ಎಲ್ಲಾ; ಪರಿವಾರ: ಸಂಬಂಧದವರು; ಮಹೀಪಾಲ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ಆರಿತದು +ಬೊಬ್ಬೆಯಲಿ +ದುಗುಡದ
ಭಾರದಲಿ+ ತಲೆಗುತ್ತಿತ್+ಇವರ್
ಉಬ್ಬಾರದಲಿ +ಭುಲ್ಲವಿಸಿತ್+ಅವರು +ವಿಘಾತಿಯಿಂದ್+ಇವರು
ಪೂರವಿಸಿದುದು+ ಪುಳಕದಲಿ +ದೃಗು
ವಾರಿ +ಪೂರದಲ್+ಇವರ್+ಅಖಿಳ +ಪರಿ
ವಾರವಿದ್ದುದು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ದೃಗುವಾರಿ, ದುಗುಡ, ವಿಘಾತಿ – ಕೌರವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ
(೨) ಬೊಬ್ಬೆ, ಭುಲ್ಲವಿಸು, ಪೂರವಿಸು – ಪಾಂಡವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ

ನಿಮ್ಮ ಟಿಪ್ಪಣಿ ಬರೆಯಿರಿ