ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದೆಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ (ಕರ್ಣ ಪರ್ವ, ೧೨ ಸಂಧಿ, ೨೪ ಪದ್ಯ)
ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ತಿಳಿಸುತ್ತಾ,ಭೀಮನು ಕರ್ಣನೆದುರು ಬಂದು ಎಲವೋ ಸೂತನ ಮಗನೇ, ದೊರೆಯನ್ನು ನೀನು ನೋಯಿಸಿದೆಯೆಲಾ, ನಿನ್ನ ರಕ್ತವನ್ನು ಚೆಲ್ಲುತ್ತೇನೆ. ನಿನ್ನನ್ನು ಹಿಂದಿಟ್ಟುಕೊಂಡು ರಕ್ಷಿಸುವವನನ್ನು ತೋರಿಸು ಎನ್ನುತ್ತಾ ಭೀಮನು ಬಾಣಗಳ ಮಳೆಗೆರೆಯಲು, ದಿಕ್ಕುಗಳು ಕತ್ತಲುಗೂಡಿಸಿದವು, ಭೀಮನ ಕೈಚಳಕಕ್ಕೆ ಮಿತಿಯೇ ಇರಲಿಲ್ಲ ಅವನ ಕೋಪದಮಿತಿಯನ್ನು ನಾನರಿಯೆ ಎಂದು ಸಂಜಯನು ವಿವರಿಸುತ್ತಿದ್ದನು.
ಅರ್ಥ:
ಸೂತ: ರಥವನ್ನು ಓಡಿಸುವವ; ಮಗ: ಪುತ್ರ; ರಾಯ: ರಾಜ; ಅಳಲು: ದುಃಖಿಸು; ರಕುತ: ರಕ್ತ, ನೆತ್ತರು; ತುಳುಕು: ಅಲ್ಲಾಡಿಸು; ಹಿಂದೆ: ಹಿಂಭಾಗ; ತೋರು: ಪ್ರದರ್ಶಿಸು; ಬಲು: ಬಹಳ; ನಾರಾಚ: ಬಾಣ, ಸರಳು; ಕತ್ತಲು: ಅಂಧಕಾರ; ದೆಸೆ: ದಿಕ್ಕು; ಕೈಮಾಡು: ಆಡಿಸು, ಕೈಹಾಕು; ಚಳಕ: ಚಾತುರ್ಯ; ಎಸು: ಹೊಡೆ, ಬಾಣ ಪ್ರಯೋಗ; ಕೇಣ:ಕೋಪ; ಅಳತೆ: ಪ್ರಮಾಣ; ಅರಿ: ತಿಳಿ;
ಪದವಿಂಗಡಣೆ:
ಎಲವೊ+ ಸೂತನ +ಮಗನೆ +ರಾಯನನ್
ಅಳಲಿಸಿದೆಲಾ+ ನಿನ್ನ +ರಕುತವ
ತುಳುಕುವೆನು+ ಹಿಂದಿಕ್ಕಿಕೊಂಬನ+ ತೋರು +ತೋರೆನುತ
ಬಲುಸರಿಯ+ ನಾರಾಚದಲಿ+ ಕ
ತ್ತಲಿಸೆ+ ದೆಸೆ+ ಕೈಮಾಡಿದನು+ ಕೈ
ಚಳಕದ್+ಎಸುಗೆಯ +ಕೇಣದ್+ಅಳತೆಯನ್+ಅರಿಯೆ +ನಾನೆಂದ
ಅಚ್ಚರಿ:
(೧) ಕೋಪದ ನುಡಿಗಳು: ಎಲವೋ ಸೂತನ ಮಗನೆ, ತೋರು ತೋರೆನುತ, ರಕುತವ ತುಳುಕುವೆನು
(೨) ಕ ಕಾರದ ಪದಗಳು – ಕತ್ತಲಿಸೆದೆಸೆ ಕೈಮಾಡಿದನು ಕೈಚಳಕದೆಸುಗೆಯ ಕೇಣದಳತೆಯನರಿಯೆ