ಪದ್ಯ ೧೫: ಭೀಮನ ಆಗಮನವು ಹೇಗಿತ್ತು?

ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ (ಕರ್ಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಹೊರಹೊಮ್ಮುತ್ತಿರುವ ಉಸಿರಿನಲ್ಲಿ ಹೊಗೆಯು ಗೋಚರವಾಗುತ್ತಿದೆ. ಕೆಂಪೇರಿದ ಕಣ್ಣುಗಳ ಎರಡು ಕೊನೆಗಳಲ್ಲೂ ಕಿಡಿಗಳು ಕಾಣುತ್ತಿವೆ. ಪರಾಕ್ರಮದ ಅಹಂಕಾರ ಜ್ವರವೇರಿ ಮೈಬಿಸಿಯಾಗಿದೆ. ಇವನ ಬರುವಿಕೆಯಲ್ಲಿ ಕಠೋರತೆಯು ಎದ್ದುಕಾಣುತ್ತಿದೆ ಎಂದು ಶಲ್ಯನು ಕರ್ಣನಿಗೆ ಹೇಳಿದನು.

ಅರ್ಥ:
ಉರಿ: ಬೆಂಕಿ; ಚೂಣಿ:ಮುಂಭಾಗ; ಉಸುರು: ಶ್ವಾಸ; ಹೊಗೆ: ಧೂಮ; ಉಬ್ಬರ: ಅತಿಶಯ, ಹೆಚ್ಚಳ; ಕಂಪು: ರಕ್ತವರ್ಣ; ಅಕ್ಷಿ: ಕಣ್ಣು; ಕೋಡಿ: ಪ್ರವಾಹ; ಒಗು: ಹೊರಹೊಮ್ಮುವಿಕೆ ; ಕಿಡಿ: ಬೆಂಕಿಯ ಜ್ವಾಲೆ; ತುಷಾರ: ತಂಪಾದ, ಶೀತಲವಾದ, ಹಿಮ; ಚಯ: ಸಮೂಹ, ರಾಶಿ, ಗುಂಪು; ಸ್ಫುರಿತ: ಹೊಳೆದ; ಅಹಂಕಾರ: ದರ್ಪ, ಗರ್ವ; ಪ್ರತಾಪ: ಪರಾಕ್ರಮ; ಜ್ವರ: ಕಾವು; ಮೈ: ತನು; ಕಾವು: ತಾಪ, ಬಿಸಿ; ಏರು: ಹೆಚ್ಚಾಗು; ನಿಬ್ಬರ: ಅತಿಶಯ, ಹೆಚ್ಚಳ, ತುಂಬಿದ; ಬರವು: ಆಗಮನ; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರ +ಹೊಗೆ
ಉಬ್ಬರಿಸುತದೆ +ಕೆಂಪೇರಿದ್+ಅಕ್ಷಿಯಲ್
ಎರಡು +ಕೋಡಿಯಲ್+ಒಗುತಲ್+ಅದೆ+ ಕಿಡಿಗಳ+ ತುಷಾರಚಯ
ಸ್ಫುರದ್+ಅಹಂಕಾರ+ಪ್ರತಾಪ
ಜ್ವರದಿ+ ಮೈ +ಕಾಹೇರುತದೆ+ ನಿ
ಬ್ಬರದ +ಬರವಿಂದ್+ಈತನದು +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಉಸಿರು, ಕಣ್ಣು, ತನುವಿನ ತಾಪ – ಕೋಪವನ್ನು ವರ್ಣಿಸಲು ಬಳಸಿದ ಸಾಧನಗಳು

ನಿಮ್ಮ ಟಿಪ್ಪಣಿ ಬರೆಯಿರಿ