ಪದ್ಯ ೧೪: ಭೀಮನು ಯಾರ ರೂಪವಾಗಿ ಶಲ್ಯನಿಗೆ ಕಂಡನು?

ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೊ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಲವಿದೇನೆಂದ (ಕರ್ಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನ ಇಂಗಿತವನ್ನು ಅವನು ಮನಸ್ಸಿನಲ್ಲಿ ಏನನ್ನು ದೃಢೀಕರಿಸಿ ಬರುತ್ತಿರುವ ರೀತಿಯನ್ನು ಶಲ್ಯ ಗಮನಿಸಿ ಕರ್ಣನನ್ನು ನೋಡಿ, ಭೀಮನನ್ನು ನೋಡೆಂದು ಸನ್ನೆ ಮಾಡಿ, ಇವನಾರೆಂದು ಬಲ್ಲೆಯ ಕರ್ಣ ಎಂದು ಕೇಳಿದ. ಇವನು ಭೀಮನೋ, ಭೈರವನೋ, ಶಿವನೋ, ನರಸಿಂಹನೋ, ಕಾಲಾಂತಕನೋ ತಿಳಿಯದಗಿದೆ ಇದೆಂತಹ ಕೋಲಾಹಲ ಎಂದನು.

ಅರ್ಥ:
ಪವನ: ಗಾಳಿ, ವಾಯು; ಸುತ: ಮಗ; ಪವನಸುತ: ವಾಯುವಿನ ಮಗ (ಭೀಮ); ಮನ: ಮನಸ್ಸು; ಅಂಘವಣೆ: ರೀತಿ, ಬಯಕೆ, ಉದ್ದೇಶ; ಮಾದ್ರೇಶ: ಮದ್ರ ದೇಶದ ಒಡೆಯ (ಶಲ್ಯ); ಕಂಡು: ನೋಡು; ರವಿಸುತ: ಕರ್ಣ; ಮುಖ: ಆನನ, ವಕ್ತ್ರ; ಮುರಿ: ಸೀಳು; ತೋರು: ಪ್ರದರ್ಶಿಸು; ಬಲ್ಲೈ: ತಿಳಿದು; ಭೈರವ: ಶಿವನ ಅವತಾರ; ಭರ್ಗ: ಶಿವ; ಮನುಜ: ನರ; ಕಂಠೀರವ: ಸಿಂಹ; ಕಾಲ: ಸಮಯ; ಅಂತಕ: ಯಮ; ಕೋಲಾಹಲ:ಗದ್ದಲ, ಅವಾಂತರ;

ಪದವಿಂಗಡಣೆ:
ಪವನಸುತನ್+ಇಂಗಿತವ +ಮನದ್
ಅಂಘವಣೆಯನು +ಮಾದ್ರೇಶ +ಕಂಡನು
ರವಿಸುತನ +ನೋಡಿದನು +ಮುಖದಲಿ +ಮುರಿದು +ತೋರಿದನು
ಇವನ+ ಬಲ್ಲೈ +ಭೀಮನೋ +ಭೈ
ರವನೊ+ ಭರ್ಗನೊ +ಮನುಜ +ಕಂಠೀ
ರವನೊ +ಕಾಲಾಂತಕನೊ +ಕೋಳಾಹಲವ್+ಇದೇನೆಂದ

ಅಚ್ಚರಿ:
(೧) ಭೀಮನು ಕಂಡ ಪರಿ – ಭರ್ಗ, ಮನುಜಕಂಠೀರವ, ಕಾಲಾಂತಕ, ಭೈರವ
(೨) ನರಸಿಂಹನನ್ನು ಮನುಜಕಂಠೀರವ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ