ಪದ್ಯ ೯: ಭೀಮನು ಹೇಗೆ ದುಃಖಿಸಿದನು?

ನರನ ಖಾತಿಗೆ ದ್ರೌಪದಿಯ ತೊ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ (ಕರ್ಣ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಅಯ್ಯೋ ನಾನು ಅರ್ಜುನನ ಸಿಟ್ಟಿಗೆ ಪಾತ್ರನಾದೆನಲ್ಲಾ, ದ್ರೌಪದಿಯ ದಾಸಿಯರ ಹಂಗಿಸುವ ಮಾತಿಗೆ ಭಾಜಕನಾದೆ, ರಾಜನ ಮರಣ ಸದೃಶ್ಯವಾದ ನೋವಿಗೆ ನಾನೇ ಪಾತ್ರನಾದೆನಲ್ಲಾ!! ಅಯ್ಯೋ ಮಹಾದೇವ, ಎಂದು ಅಳುತ್ತಾ ತನ್ನ ತುದಿ ಬೆರಳಿನಿಂದ ಕಣ್ಣೀರನ್ನೊರಸಿಕೊಂಡು ದುಃಖಿಸಿದನು.

ಅರ್ಥ:
ನರ: ಅರ್ಜುನ; ಖಾತಿ: ಸಿಟ್ಟು; ತೊತ್ತು: ದಾಸಿ; ಉಪಹಾಸ್ಯ: ಅಪಹಾಸ್ಯ, ಹಂಗಿಸು; ನೃಪತಿ: ರಾಜ; ಮರಣ: ಸಾವು; ಸಾದೃಶ್ಯ: ಹೋಲಿಕೆ; ಪ್ರಹಾರ: ಹೊಡೆತ, ಪೆಟ್ಟು; ವ್ಯಥೆ: ದುಃಖ; ಕಾಣಿಕೆ: ಕೊಡುಗೆ; ಅರರೆ: ಅಯ್ಯೋ; ಭಾಜನ: ಅರ್ಹವ್ಯಕ್ತಿ, ಯೋಗ್ಯ; ಎನುತ: ಹೇಳು; ತುದಿ: ಅಗ್ರ; ವೆರಳು: ಬೆರಳು, ಅಂಗುಲಿ; ಆಲಿ: ಕಣ್ಣು; ನೀರು: ಜಲ; ಮಿಡಿ: ತವಕಿಸು; ಅಳಲು: ದುಃಖ; ಕಲಿ: ವೀರ;

ಪದವಿಂಗಡಣೆ:
ನರನ +ಖಾತಿಗೆ +ದ್ರೌಪದಿಯ +ತೊ
ತ್ತಿರುಗಳ+ಉಪಹಾಸ್ಯಕ್ಕೆ +ನೃಪತಿಯ
ಮರಣ+ ಸಾದೃಶ್ಯ+ ಪ್ರಹಾರ+ವ್ಯಥೆಯ +ಕಾಣಿಕೆಗೆ
ಅರರೆ +ಭಾಜನವಾದೆನೈ +ಹರ
ಹರ+ ಮಹಾದೇವಾ +ಎನುತ +ತುದಿ
ವೆರಳಲ್+ಆಲಿಯ +ನೀರ +ಮಿಡಿದ್+ಅಳಲಿದನು +ಕಲಿಭೀಮ

ಅಚ್ಚರಿ:
(೧) ಭೀಮನು ದುಃಖಿಸುವ ಚಿತ್ರಣ – ತುದಿವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ
(೨) ಖಾತಿ, ಉಪಹಾಸ್ಯ, ವ್ಯಥೆ – ಭೀಮನ ದುಃಖಕ್ಕೆ ಕಾರಣ

ನಿಮ್ಮ ಟಿಪ್ಪಣಿ ಬರೆಯಿರಿ