ಪದ್ಯ ೪೯: ಧರ್ಮಜನ ಮೇಲೆ ಕರ್ಣನು ಯಾವ ಬಾಣವನ್ನು ಬಿಟ್ಟನು?

ಅಕಟ ಚಂದ್ರಿಕೆ ಗೆದ್ದುದೋ
ಪಾವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿನೋಡಾದಡೆನುತೆಚ್ಚನು ಮಹೀಪತಿಯ (ಕರ್ಣ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅಯ್ಯೋ! ಬೆಳದಿಂಗಳು ಬೆಂಕಿಯ ಝಳವನ್ನು ಗೆದ್ದಿತು, ಧರ್ಮಜನ ಬಾಣದಿಂದ ಕರ್ಣನು ನೊಂದನು, ಆಹಾ ಮಹಾದೇವ.. ಧರ್ಮರಾಯ ನೀವು ಮೋಸಮಾಡದವರು, ನಮ್ಮಂತೆ ಪರರಿಗೆ ತೊಂದರೆಯನ್ನು ಕೊಡದವರು, ಹಾಗಾದರೆ ನೀವು ಪರಶುರಾಮರ ಈ ಬಾಣದ ಸವಿಯನ್ನು ಆಹ್ಲಾದಿಸಿ ಎಂದು ಕರ್ಣನು ಧರ್ಮಜನ ಮೇಳೆ ಬಾಣವನ್ನು ಬಿಟ್ಟನು.

ಅರ್ಥ:
ಅಕಟ: ಅಯ್ಯೋ; ಚಂದ್ರಿಕೆ:ಬೆಳದಿಂಗಳು; ಗೆದ್ದು: ಜಯ; ಪಾವಕ: ಬೆಂಕಿ, ಅಗ್ನಿ; ಝಳ: ಶಾಖ, ಉಷ್ಣತೆ; ವಿಕಳ: ಭ್ರಮೆ, ಭ್ರಾಂತಿ; ಶರ: ಬಾಣ; ನೊಂದನು: ನೋವನ್ನುಂಡನು, ತೊಂದರೆ; ಅಕುಟಿಲ: ಮೋಸ ಮಾಡದವ; ಎಮ್ಮವೊಲು: ನಮ್ಮ ಹಾಗೆ; ಬಾಧಕ: ತೊಂದರೆ ಕೊಡುವವ; ಪರರು: ಇತರರು; ಧರ: ಹಿಡಿದವ; ಪರಶುಧರ: ಪರಶುರಾಮ; ಸಾಯಕ: ಬಾಣ; ಸವಿ: ತಿನ್ನು, ಆನಂದಿಸು; ಎಚ್ಚು: ಬಾಣಬಿಡು; ಮಹೀಪತಿ: ಭೂಮಿಯ ಒಡೆಯ (ರಾಜ);

ಪದವಿಂಗಡಣೆ:
ಅಕಟ +ಚಂದ್ರಿಕೆ+ ಗೆದ್ದುದೋ
ಪಾವಕನ +ಝಳವ್+ಈ+ ಧರ್ಮಪುತ್ರನ
ವಿಕಳ+ ಶರದಲಿ+ ಕರ್ಣ+ನೊಂದನಲಾ +ಮಹಾದೇವ
ಅಕುಟಿಲರು +ನೀವ್+ಎಮ್ಮವೊಲು+ ಬಾ
ಧಕರೆ +ಪರರಿಗೆ +ಪರಶುಧರ+ ಸಾ
ಯಕದ +ಸವಿನೋಡ್+ಆದಡ್+ಎನುತ್+ಎಚ್ಚನು +ಮಹೀಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಕಟ ಚಂದ್ರಿಕೆ ಗೆದ್ದುದೋ ಪಾವಕನ ಝಳವೀ
(೨) ಕರ್ಣನು ಧರ್ಮರಾಯನನ್ನು ಅಣುಕಿಸುತ್ತಿರುವುದು – ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
(೩) ಶರ, ಸಾಯಕ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ