ಅಕಟ ಚಂದ್ರಿಕೆ ಗೆದ್ದುದೋ
ಪಾವಕನ ಝಳವೀ ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
ಅಕುಟಿಲರು ನೀವೆಮ್ಮವೊಲು ಬಾ
ಧಕರೆ ಪರರಿಗೆ ಪರಶುಧರ ಸಾ
ಯಕದ ಸವಿನೋಡಾದಡೆನುತೆಚ್ಚನು ಮಹೀಪತಿಯ (ಕರ್ಣ ಪರ್ವ, ೧೧ ಸಂಧಿ, ೪೯ ಪದ್ಯ)
ತಾತ್ಪರ್ಯ:
ಅಯ್ಯೋ! ಬೆಳದಿಂಗಳು ಬೆಂಕಿಯ ಝಳವನ್ನು ಗೆದ್ದಿತು, ಧರ್ಮಜನ ಬಾಣದಿಂದ ಕರ್ಣನು ನೊಂದನು, ಆಹಾ ಮಹಾದೇವ.. ಧರ್ಮರಾಯ ನೀವು ಮೋಸಮಾಡದವರು, ನಮ್ಮಂತೆ ಪರರಿಗೆ ತೊಂದರೆಯನ್ನು ಕೊಡದವರು, ಹಾಗಾದರೆ ನೀವು ಪರಶುರಾಮರ ಈ ಬಾಣದ ಸವಿಯನ್ನು ಆಹ್ಲಾದಿಸಿ ಎಂದು ಕರ್ಣನು ಧರ್ಮಜನ ಮೇಳೆ ಬಾಣವನ್ನು ಬಿಟ್ಟನು.
ಅರ್ಥ:
ಅಕಟ: ಅಯ್ಯೋ; ಚಂದ್ರಿಕೆ:ಬೆಳದಿಂಗಳು; ಗೆದ್ದು: ಜಯ; ಪಾವಕ: ಬೆಂಕಿ, ಅಗ್ನಿ; ಝಳ: ಶಾಖ, ಉಷ್ಣತೆ; ವಿಕಳ: ಭ್ರಮೆ, ಭ್ರಾಂತಿ; ಶರ: ಬಾಣ; ನೊಂದನು: ನೋವನ್ನುಂಡನು, ತೊಂದರೆ; ಅಕುಟಿಲ: ಮೋಸ ಮಾಡದವ; ಎಮ್ಮವೊಲು: ನಮ್ಮ ಹಾಗೆ; ಬಾಧಕ: ತೊಂದರೆ ಕೊಡುವವ; ಪರರು: ಇತರರು; ಧರ: ಹಿಡಿದವ; ಪರಶುಧರ: ಪರಶುರಾಮ; ಸಾಯಕ: ಬಾಣ; ಸವಿ: ತಿನ್ನು, ಆನಂದಿಸು; ಎಚ್ಚು: ಬಾಣಬಿಡು; ಮಹೀಪತಿ: ಭೂಮಿಯ ಒಡೆಯ (ರಾಜ);
ಪದವಿಂಗಡಣೆ:
ಅಕಟ +ಚಂದ್ರಿಕೆ+ ಗೆದ್ದುದೋ
ಪಾವಕನ +ಝಳವ್+ಈ+ ಧರ್ಮಪುತ್ರನ
ವಿಕಳ+ ಶರದಲಿ+ ಕರ್ಣ+ನೊಂದನಲಾ +ಮಹಾದೇವ
ಅಕುಟಿಲರು +ನೀವ್+ಎಮ್ಮವೊಲು+ ಬಾ
ಧಕರೆ +ಪರರಿಗೆ +ಪರಶುಧರ+ ಸಾ
ಯಕದ +ಸವಿನೋಡ್+ಆದಡ್+ಎನುತ್+ಎಚ್ಚನು +ಮಹೀಪತಿಯ
ಅಚ್ಚರಿ:
(೧) ಉಪಮಾನದ ಪ್ರಯೋಗ – ಅಕಟ ಚಂದ್ರಿಕೆ ಗೆದ್ದುದೋ ಪಾವಕನ ಝಳವೀ
(೨) ಕರ್ಣನು ಧರ್ಮರಾಯನನ್ನು ಅಣುಕಿಸುತ್ತಿರುವುದು – ಧರ್ಮಪುತ್ರನ
ವಿಕಳ ಶರದಲಿ ಕರ್ಣನೊಂದನಲಾ ಮಹಾದೇವ
(೩) ಶರ, ಸಾಯಕ – ಸಮನಾರ್ಥಕ ಪದ