ಇರಿತ ಮುನ್ನವೊ ಸುಭಟರಿಗೆ ಬೊ
ಬ್ಬಿರಿತ ಮುನ್ನವೊ ನಿಮ್ಮ ನುಡಿಯಲಿ
ಮುರಿವಡೆದಿರೈ ನೀವೆನುತ ನೃಪನಂಬ ಹರೆಗಡಿದು
ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ
ಯೆರಗಿದವು ತುರುಗಿದವು ತೆತ್ತಿಸಿದವು ರಥಾಂಗದಲಿ (ಕರ್ಣ ಪರ್ವ, ೧೧ ಸಂಧಿ, ೪೬ ಪದ್ಯ)
ತಾತ್ಪರ್ಯ:
ಧರ್ಮಜನು ಬಾಣಗಳನ್ನು ಕರ್ಣನ ಮೇಲೆ ಹೊಡೆಯಲು, ಕರ್ಣನು ಅವನ ಬಾಣಗಳನ್ನು ತುಂಡು ಮಾಡಿ ವೀರರಿಗೆ ಶತ್ರುವನ್ನಿರಿಯುವುದು ಮುಖ್ಯವೋ, ಬೊಬ್ಬಿರಿಯುವುದು ಮುಖ್ಯವೋ ನಿಮ್ಮ ಮಾತಿನಲ್ಲಿ ನೀವೇ ಸಿಕ್ಕಿದಿರಿ, ಎಂದು ಹೇಳುತ್ತಾ ಧರ್ಮರಾಯನಿಗೆ ಅವಕಾಶವೇ ಕೊಡದೆ ಬಾಣಗಳಿಂದ ಮತ್ತೆ ಮತ್ತೆ ಹೊಡೆದನು. ಅವನ ಬಾಣಗಳು ಧರ್ಮಜನ ರಥದ ಗಾಲಿಯಲ್ಲಿ ನೆಟ್ಟವು.
ಅರ್ಥ:
ಇರಿ: ಚುಚ್ಚು; ಮುನ್ನ: ಮುಂಚೆ; ಸುಭಟ: ಸೈನಿಕ; ಬೊಬ್ಬಿರಿ: ಕೂಗು; ನುಡಿ: ಮಾತು; ಮುರಿ: ಸೀಳು; ಅಂಬು: ಬಾಣ; ಹರೆಗಡಿ:ಚೆಲ್ಲಾಪಿಲ್ಲಿಯಾಗುವಂತೆ ಕತ್ತರಿಸು; ತೆರಹು: ಸಮಯ, ಬಿಚ್ಚು; ಕೊಡದೆ: ನೀಡದೆ; ನೃಪ: ರಾಜ; ಅಸ್ತ್ರ: ಆಯುಧ, ಶಸ್ತ್ರ; ತರಿ: ಕಡಿ, ಕತ್ತರಿಸು; ಮಗುಳು:ಪುನಃ, ಮತ್ತೆ; ಎಚ್ಚು: ಬಾಣಬಿಡು; ಶರಾವಳಿ: ಬಾಣಗಳ ಗುಂಪು/ಸಾಲು; ಎರಗು: ಬೀಳು; ತುರುಗು:ಸಂದಣಿಸು, ಹೆಚ್ಚಾಗು; ತೆತ್ತಿಸು: ಕೂಡಿಸು; ರಥಾಂಗ: ರಥದ ಭಾಗ;
ಪದವಿಂಗಡಣೆ:
ಇರಿತ +ಮುನ್ನವೊ +ಸುಭಟರಿಗೆ+ ಬೊ
ಬ್ಬಿರಿತ +ಮುನ್ನವೊ +ನಿಮ್ಮ +ನುಡಿಯಲಿ
ಮುರಿವಡೆದಿರೈ +ನೀವೆನುತ+ ನೃಪನ್+ಅಂಬ +ಹರೆಗಡಿದು
ತೆರಹುಗೊಡದ್+ಎಚ್ಚನು +ನೃಪ+ಅಸ್ತ್ರವ
ತರಿದು +ಮಗುಳ್+ಎಚ್ಚನು +ಶರಾವಳಿ
ಎರಗಿದವು +ತುರುಗಿದವು +ತೆತ್ತಿಸಿದವು +ರಥಾಂಗದಲಿ
ಅಚ್ಚರಿ:
(೧) ಬಾಣ ತಾಗಿದ ಪರಿ – ಎರಗಿದವು , ತುರುಗಿದವು, ತೆತ್ತಿಸಿದವು
(೨) ಒಂದೇ ಸಮನೆ ಬಾಣ ಪ್ರಯೋಗವನ್ನು ತಿಳಿಸಲು – ತೆರಹುಗೊಡದೆಚ್ಚನು ನೃಪಾಸ್ತ್ರವ
ತರಿದು ಮಗುಳೆಚ್ಚನು ಶರಾವಳಿ ಯೆರಗಿದವು