ಪದ್ಯ ೪೪: ದುಶ್ಯಾಸನನು ಭೀಮನಿಗೆ ಏನು ಹೇಳಿದ?

ಎಲವೋ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಕರ್ಣನ ಮಗನನ್ನು ಕೊಂದೆನೆಂಬ ದೊಡ್ಡಸ್ತಿಕೆಯಿಂದ ಸಂತಸಗೊಳ್ಳಬೇಡ. ನಿನ್ನಿಂದ ಏನು ಆಗುವುದಿಲ್ಲ, ಕರೆಸು ಕೃಷ್ಣಾರ್ಜುನರನ್ನು ನಿನ್ನ ಬೆಂಬಲಕೆ, ನಿನ್ನ ಹೆಮ್ಮೆಯು ನಿನ್ನ ತಲೆಗೆ ಮುಳುವಾದೀತು ಎನ್ನುತ್ತಾ ದುಶ್ಯಾಸನನು ಭೀಮನನ್ನು ತನ್ನ ಸೈನ್ಯದಿಂದ ಮುತ್ತಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.

ಅರ್ಥ:
ಆತ್ಮಜ: ಪುತ್ರ; ಹೊಯ್ದು: ಹೊಡೆದು; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಹೊರೆ: ಭಾರ, ರಕ್ಷಣೆ; ಏರು: ಮೇಲೆ ಹತ್ತು; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಕರಸು: ಬರೆಮಾಡು; ಬಳಿ: ಸಮೀಪ, ಕೇವಲ; ಬಿಗುಹು:ಬಿಗಿ; ಬಿಂಕ: ಗರ್ವ, ಜಂಬ; ತಲೆ: ಶಿರ; ಬಹುದು: ಬಂದಿಹುದು; ಅರಿ: ತಿಳಿ; ಅತಿ: ಬಹಳ; ನಂದನ: ಮಗ; ಅರಸ: ರಾಜ; ಕೇಳು: ಆಲಿಸು; ಎಚ್ಚು: ಬಾಣ ಬಿಡು, ಏಟು;

ಪದವಿಂಗಡಣೆ:
ಎಲವೋ+ ಕರ್ಣ+ಆತ್ಮಜನ +ಹೊಯ್ದ್
ಅಗ್ಗಳಿಕೆಯಲಿ +ಹೊರೆ+ಏರದಿರು+ ಪಡಿ
ಬಲಕೆ +ಕರಸ್+ಆ+ ಕೃಷ್ಣ +ಪಾರ್ಥರ +ನಿನ್ನಲ್+ಏನಹುದು
ಬಳಿಯ +ಬಿಗುಹಿನ +ಬಿಂಕ +ನಿನ್ನಯ
ತಲೆಗೆ +ಬಹುದಾವರಿಯೆವ್+ಎನುತ್+ಅತಿ
ಬಳನನ್+ಎಚ್ಚನು +ನಿನ್ನ +ನಂದನನ್+ಅರಸ +ಕೇಳೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಳಿಯ ಬಿಗುಹಿನ ಬಿಂಕ

ನಿಮ್ಮ ಟಿಪ್ಪಣಿ ಬರೆಯಿರಿ