ಎಲವೋ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೪೪ ಪದ್ಯ)
ತಾತ್ಪರ್ಯ:
ಎಲವೋ ಭೀಮ, ಕರ್ಣನ ಮಗನನ್ನು ಕೊಂದೆನೆಂಬ ದೊಡ್ಡಸ್ತಿಕೆಯಿಂದ ಸಂತಸಗೊಳ್ಳಬೇಡ. ನಿನ್ನಿಂದ ಏನು ಆಗುವುದಿಲ್ಲ, ಕರೆಸು ಕೃಷ್ಣಾರ್ಜುನರನ್ನು ನಿನ್ನ ಬೆಂಬಲಕೆ, ನಿನ್ನ ಹೆಮ್ಮೆಯು ನಿನ್ನ ತಲೆಗೆ ಮುಳುವಾದೀತು ಎನ್ನುತ್ತಾ ದುಶ್ಯಾಸನನು ಭೀಮನನ್ನು ತನ್ನ ಸೈನ್ಯದಿಂದ ಮುತ್ತಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.
ಅರ್ಥ:
ಆತ್ಮಜ: ಪುತ್ರ; ಹೊಯ್ದು: ಹೊಡೆದು; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಹೊರೆ: ಭಾರ, ರಕ್ಷಣೆ; ಏರು: ಮೇಲೆ ಹತ್ತು; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಕರಸು: ಬರೆಮಾಡು; ಬಳಿ: ಸಮೀಪ, ಕೇವಲ; ಬಿಗುಹು:ಬಿಗಿ; ಬಿಂಕ: ಗರ್ವ, ಜಂಬ; ತಲೆ: ಶಿರ; ಬಹುದು: ಬಂದಿಹುದು; ಅರಿ: ತಿಳಿ; ಅತಿ: ಬಹಳ; ನಂದನ: ಮಗ; ಅರಸ: ರಾಜ; ಕೇಳು: ಆಲಿಸು; ಎಚ್ಚು: ಬಾಣ ಬಿಡು, ಏಟು;
ಪದವಿಂಗಡಣೆ:
ಎಲವೋ+ ಕರ್ಣ+ಆತ್ಮಜನ +ಹೊಯ್ದ್
ಅಗ್ಗಳಿಕೆಯಲಿ +ಹೊರೆ+ಏರದಿರು+ ಪಡಿ
ಬಲಕೆ +ಕರಸ್+ಆ+ ಕೃಷ್ಣ +ಪಾರ್ಥರ +ನಿನ್ನಲ್+ಏನಹುದು
ಬಳಿಯ +ಬಿಗುಹಿನ +ಬಿಂಕ +ನಿನ್ನಯ
ತಲೆಗೆ +ಬಹುದಾವರಿಯೆವ್+ಎನುತ್+ಅತಿ
ಬಳನನ್+ಎಚ್ಚನು +ನಿನ್ನ +ನಂದನನ್+ಅರಸ +ಕೇಳೆಂದ
ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಳಿಯ ಬಿಗುಹಿನ ಬಿಂಕ