ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಯಾಸನನು ಪವನಜನ (ಕರ್ಣ ಪರ್ವ, ೧೦ ಸಂಧಿ, ೪೩ ಪದ್ಯ)
ತಾತ್ಪರ್ಯ:
ಭೀಮ ಕರ್ಣರ ಯುದ್ಧವನ್ನು ನೋಡಿದ ದುರ್ಯೋಧನನು ನಮ್ಮ ಸೇನಾಧಿಪತಿಗೆ ಭಾರಿ ಕಾಳಗ ಬಿದ್ದಿವೆ. ಅವನ ಸಹಾಯಕ್ಕೆ ಯಾರೂ ಇಲ್ಲ, ಅವನ ಸಹಾಯಕ್ಕೆ ಹೋಗಬಾರದೆಂಬ ಪ್ರತಿಜ್ಞೆಯನ್ನೇನಾದರೂ ಮಾಡಿರುವಿರಾ? ಎಂದು ಕೌರವನು ತನ್ನವರನ್ನು ಮೂದಲಿಸಿದಲು, ಕರ್ಣ, ಪಕ್ಕಕ್ಕೆ ಸರಿ ಎಂದು ಮಹಾರಥರನ್ನು ಕೈಬೀಸಿಕರೆದು ದುಶ್ಯಾಸನನು ಭೀಮನನ್ನು ತಡೆದನು.
ಅರ್ಥ:
ಭಾರಿ: ದೊಡ್ಡದಾದ, ಭಯಂಕರ; ಅಂಕ: ಕಾಳಗ; ದಳಪತಿ: ಸೈನ್ಯ; ಪಡಿಸಾರಿಕೆ: ಪ್ರತಿಭಟಿಸುವಂತ; ಭಟ: ಸೈನಿಕರು; ಪರಿವಾರ: ಸುತ್ತಲಿನವರು, ಪರಿಜನ; ಪಂಥ: ಸ್ಪರ್ಧೆ; ರಾಯ: ರಾಜ; ಮೂದಲಿಸು: ಹಂಗಿಸು; ಕೂರಲಗು: ಹರಿತವಾದ ಬಾಣ; ಅಂಬು: ಬಾಣ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕೈ: ಕರ; ವೀಸಿ: ಬೀಸು, ತೂಗುವಿಕೆ; ರವಿಸುತ: ಸೂರ್ಯನ ಮಗ (ಕರ್ಣ); ಸಾರು: ಪಕ್ಕಕ್ಕೆ ಸರಿ; ಕೆಣಕು: ಪ್ರಚೋದಿಸು; ಪವನಜ: ಭೀಮ;
ಪದವಿಂಗಡಣೆ:
ಭಾರಿ+ಅಂಕವು +ದಳಪತಿಗೆ +ಪಡಿ
ಸಾರಿಕೆಯ +ಭಟರಿಲ್ಲಲ್+ಆ+ ಪರಿ
ವಾರಕಿದು +ಪಂಥವೆ +ಎನುತ +ಕುರುರಾಯ +ಮೂದಲಿಸೆ
ಕೂರಲಗಿನ್+ಅಂಬುಗಿದು +ಬಳಿಯ +ಮ
ಹಾರಥರ +ಕೈವೀಸಿ +ರವಿಸುತ
ಸಾರೆನುತ+ ಕೆಣಕಿದನು +ದುಶ್ಯಾಸನನು +ಪವನಜನ