ಪದ್ಯ ೩೬: ಭೀಮನು ವೃಷಸೇನ ಮತ್ತು ಸುಷೇಣರಿಗೆ ಏನು ಹೇಳಿದನು?

ರಾಯದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ (ಕರ್ಣ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭಿಮನು ವೃಷಸೇನ ಮತ್ತು ಸುಷೇಣರನ್ನು ಕಂಡು, ಅಯ್ಯೋ ಮಕ್ಕಳಿರಾ! ಸೈನ್ಯದಲ್ಲಿ ಸೇರಿ ಯುದ್ಧ ಮಾಡಲು ಇದೇನು ಕಜ್ಜಾಯವೇ? ನಿಮ್ಮನ್ನು ಮನ್ನಿಸಿ ಕಾಪಾಡುತ್ತೇನೆ, ನಿಮ್ಮ ಪರಾಕ್ರಮವು ಹೊಗಳಲು ಯೋಗ್ಯವಾಗಿದೆ. ಸುಮ್ಮನೆ ಏಕೆ ಸಾಯುತ್ತೀರಿ? ಸೇನಾಧಿಪತಿಯಾದ ನಿಮ್ಮ ತಂದೆಯನ್ನು ಯುದ್ಧಕ್ಕೆ ಕಳಿಸಿರಿ ಎಂದು ಕರ್ಣನ ಮಕ್ಕಳಿಗೆ ಭೀಮನು ಹೇಳಿದನು.

ಅರ್ಥ:
ರಾಯ: ರಾಜ; ದಳ: ಸೈನ್ಯ; ಸೆಣಸು: ವಿರೋಧ, ಪ್ರತಿ ಭಟನೆ; ಕಜ್ಜಾಯ: ಅತಿರಸ, ಸಿಹಿತಿಂಡಿ; ಮಕ್ಕಳು: ತನುಜ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕಾಯು:ಕಾಪಾಡು, ಕಾವಲಿರು; ಬಳಿಕ: ನಂತರ; ಅಂಘವಣೆ: ನೋಡಿ; ಲೇಸು: ಒಳಿತು; ಸಾಯಲು: ಸಾವು, ಮರಣ; ಹಿಂಗು: ಪರಿಹಾರವಾಗು, ನಿವಾರಣೆಯಾಗು; ನೋಯಿಸು: ಬೇನೆ, ಶೂಲೆ; ಅನುಚಿತ: ಸರಿಯಿಲ್ಲದ; ಸೇನಾನಾಯಕ: ಸೇನಾಧಿಪತಿ; ಅಯ್ಯ: ತಂದೆ; ಕಳುಹು: ಬರೆಮಾಡು;

ಪದವಿಂಗಡಣೆ:
ರಾಯದಳದಲಿ+ ಸೆಣಸಲಿದು+ ಕ
ಜ್ಜಾಯವೇ +ಮಕ್ಕಳಿರ+ ಮನ್ನಿಸಿ
ಕಾಯಿದೆನು +ಬಳಿಕೇನು +ನಿಮ್+ಅಂಘವಣೆ +ಲೇಸಾಯ್ತು
ಸಾಯಲೇತಕೆ+ ಹಿಂಗಿ +ನಿಮ್ಮನು
ನೋಯಿಸುವುದ್+ಅನುಚಿತವು +ಸೇನಾ
ನಾಯಕನು +ನಿಮ್ಮಯ್ಯನ್+ಆತನ +ಕಳುಹಿ +ನೀವೆಂದ

ಅಚ್ಚರಿ:
(೧) ಭೀಮನ ನುಡಿ: ರಾಯದಳದಲಿ ಸೆಣಸಲಿದು ಕಜ್ಜಾಯವೇ