ಪದ್ಯ ೨೫: ದೇವತೆಗಳೇಕ ಅಳಲಿದರು?

ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ (ಕರ್ಣ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಾಕ್ಷಸರು ದೇವತೆಗಳನ್ನು ಹೊಡೆದರು. ಮತ್ತೆ ದೇವತೆಗಳು ಮುಂದಾಗಿ ಬರಲು, ಅವರನ್ನು ಓಡುವಂತೆ ರಾಕ್ಷಸರು ಬಡಿದರು. ಸೋತ ದೇವತೆಗಳು ಇಂದ್ರನನ್ನು ಬೈದರು, ಶಿವನಿಗೆ ಜೋಡಿಸಿದ ರಥವೇ ಕುಸಿದು ಹೋಯಿತು, ನಮ್ಮ ಪಾಡೇನು? ನಮ್ಮ ಗಂಟಳ ನಾಳವನ್ನು ಕೊಯ್ದರು ಎಂದು ದೇವತೆಗಳು ಅಳಲಿದರು.

ಅರ್ಥ:
ಹೊಯ್ದು: ಹೊಡೆದು; ಅಮರ: ದೇವತೆ; ಅಸುರ: ದಾನವ; ಅಗ್ಗ: ಹೆಚ್ಚು; ಕೈದು: ಕತ್ತಿ; ಕೈದುಕಾರ: ಕತ್ತಿಹಿಡಿದ ಸೈನಿಕ; ಮತ್ತೆ: ಪುನಃ; ನೂಕು: ತಳ್ಳು; ಮೈದೆಗೆ: ಮುಂದೆ ಹೋಗು, ತೋರು; ಒಡವೆರೆಸು: ಜೊತೆಗೂಡು; ಬೇಹ: ಬೇಕಾದ; ಬೇಹವರು: ಗೂಢಚರ್ಯ; ಬೈದು: ಜರಿದು, ತೆಗಳು; ಇಂದ್ರ: ಸುರಪತಿ; ಇಂದುಮೌಳಿ: ಶಿವ, ಶಂಕರ; ಇಂದು: ಚಂದ್ರ; ಮೌಳಿ: ಶಿರ; ಎಯ್ದು:ಸೇರು; ರಥ: ಬಂಡಿ, ತೇರು; ನಾಳ:ಶ್ವಾಸನಾಳ, ಗಂಟಲು; ಕೊಯ್ದು: ಸೀಳು; ಹುಗ್ಗಿಗ: ಶ್ರೇಷ್ಠ; ಒರಲು: ಅರಚು, ಕೂಗಿಕೊಳ್ಳು; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಹೊಯ್ದುದ್+ಅಮರರನ್+ಅಸುರರ್+ಅಗ್ಗದ
ಕೈದುಕಾರರು +ಮತ್ತೆ +ನೂಕಿತು
ಮೈದೆಗೆಯಲ್+ಒಡವೆರಸಿ +ನೂಕಿತು +ಬೇಹ +ಬೇಹವರು
ಬೈದರ್+ಇಂದ್ರನನ್+ಇಂದುಮೌಳಿಗೆ
ನೆಯ್ದ +ರಥ +ನುಗ್ಗಾಯ್ತು +ನಾಳವ
ಕೊಯ್ದರೋ +ಹುಗ್ಗಿಗರ್+ಎನುತ್+ಒರಲಿದುದು +ಸುರ +ಸ್ತೋಮ

ಅಚ್ಚರಿ:
(೧) ಅಮರರು ಅಸುರರು – ದೇವ ದಾನವ ಪದಗಳ ಬಳಕೆ
(೨) ಬೇಹ ಬೇಹವರು – ಬೇಹ ಪದದ ಬಳಕೆ
(೩) ನೂಕು, ನುಗ್ಗು ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ