ಪದ್ಯ ೧೫: ಶಿವನಿಗೆ ಯಾರು ಜಯಘೋಷಗಳನ್ನು ಹಾಡುತ್ತಿದ್ದರು?

ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರ ಗಣನಿಕರ (ಕರ್ಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಿವನು ಬಲಕ್ಕೆ ನೋಡಲು ಅಸಂಖ್ಯಾತ ಶ್ರುತಿಗಳು ಉಘೇ ಎಂದು ನಮಸ್ಕರಿಸಿದವು. ಎಡಕ್ಕೆ ತಿರುಗಲು ಹಲವಾರು ಉಪನಿಷತ್ತುಗಳು ವಂದಿಸಿದವು. ಹಿಂದಕ್ಕೆ ತಿರುಗಿ ನೋಡಲು ಅಲ್ಲಿ ಸೇರಿದ್ದ ಎಲ್ಲಾ ಚರಾಚರರುಗಳು ಜಯಘೋಷವನ್ನು ಹಾಡುತ್ತಿದ್ದರು. ಶಿವನ ಗರ್ಜನೆಯೊಡನೆ
ವೀರರಾದ ಶಿವಗಣಗಳು ಸಿಡಿಲಿನಂತೆ ಗರ್ಜಿಸಿದವು.

ಅರ್ಥ:
ಮುರಿ: ತಿರುಗು; ಬಲ: ದಕ್ಷಿಣ ಪಾರ್ಶ್ವ; ವಂಕ: ಬದಿ; ಉಘೇ: ಜಯಘೋಷ; ಎರಗು:ನಮಸ್ಕಾರ ಮಾಡು; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದಷ್ಟು; ವಾಮ: ಎಡಭಾಗ; ಕೊರಳು: ಕಂಥ; ಕೊಂಕಿನ: ತಿರುಗು; ಉಪನಿಷತ್ತು: ವೇದದ ಕೊನೆಯ ಭಾಗ; ಎರಗು: ನಮಸ್ಕರಿಸು; ಕೋಟಿ: ಅಸಂಖ್ಯಾತ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ಬೆನ್ನು: ಹಿಂಬದಿ; ನೆರೆ: ಗುಂಪು; ಸಚರಾಚರ: ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಕಪರ್ದಿ:ಜಟಾಜೂಟವುಳ್ಳವ-ಶಿವ; ಸರಿಸು: ಪಕ್ಕಕ್ಕೆ ಇಡು; ಸರಿಸ: ಸಮೀಪ; ಸಿಡಿಲು: ಚಿಮ್ಮು, ಸಿಡಿ; ಮೊಳಗು: ಹೊರಹೊಮ್ಮು; ವೀರ: ಪರಾಕ್ರಮ; ಗಣ: ಶಿವನ ಪ್ರಮಥರ ಸಮೂಹ; ನಿಕರ: ಗುಂಪು;

ಪದವಿಂಗಡಣೆ:
ಮುರಿಯೆ+ ಬಲವಂಕದಲ್+ಉಘೇ +ಎಂದ್
ಎರಗಿದವು +ಶ್ರುತಿಕೋಟಿ +ವಾಮದ
ಕೊರಳ+ ಕೊಂಕಿನಲ್+ಉಪನಿಷತ್ತುಗಳ್+ಎರಗಿದವು +ಕೋಟಿ
ತಿರುಗೆ +ಬೆನ್ನಲಿ +ನೆರೆದ +ಸಚರಾ
ಚರವುಘೇ +ಎಂದುದು +ಕಪರ್ದಿಯ
ಸರಿಸದಲಿ +ಸಿಡಿಲಂತೆ +ಮೊಳಗಿತು +ವೀರ +ಗಣನಿಕರ

ಅಚ್ಚರಿ:
(೧) ಶಿವನನ್ನು ಕಪರ್ದಿ ಎಂದು ಕರೆದಿರುವುದು
(೨) ಉಘೇ, ಕೋಟಿ – ೨ ಬಾರಿ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ