ಪದ್ಯ ೨೩: ಶಲ್ಯನು ದುರ್ಯೋಧನನಿಗೆ ಯಾವುದರ ಅರಿವಿಲ್ಲ ಎಂದು ಜರಿದನು?

ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ (ಕರ್ಣ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ನೀನು ನೀಚನನ್ನು ಕರೆತಂದು ಅವನಿಗೆ ರಾಜ್ಯದ ಪಟ್ಟವನ್ನು ಕಟ್ಟಿ ರಾಜರಿಗೆ ಸಮನೆಂದು ಪುರಸ್ಕರಿಸಿ, ಬಳಿಕ ಅವನ ನೀಚತನ ನಿನಗೆ ಬಂದಿದೆ. ಕೀಳು ಮೇಲು ಎನ್ನ್ವ ಅರಿವು ನಿನ್ನನ್ನು ಬಿಟ್ಟು ಹೋಗಿದೆ, ಸಾಕು ನಮಗಿನ್ನೇಕೆ ಶೂರತನ, ಹೀಗೆ ಹೇಳಿ ಶಲ್ಯನು ಖತಿಗೊಂಡು ಧಿಮ್ಮನೆ ನಿಂತನು.

ಅರ್ಥ:
ಖೂಳ: ದುಷ್ಟ; ಹಿಡಿ: ಬಂಧಿಸಿ; ಧರಣೀಪಾಲ: ರಾಜ; ಸರಿಮಾಡಿ: ಸಮಾನ; ರಾಜ್ಯ: ದೇಶ; ನಿಲಿಸು: ಸ್ಥಾಪಿಸು; ಬಳಿಕ: ನಂತರ; ಬಂದುದು: ತಿಳಿದು, ಗೊತ್ತುಮಾಡು; ಕೀಳು: ನೀಚ; ಮೇಲು: ಶ್ರೇಷ್ಠ; ಸೀಮೆ: ಎಲ್ಲೆ, ಗಡಿ; ಬೀಳುಕೊಂಡು: ತೊರೆದು; ಸಾಕು: ನಿಲ್ಲಿಸು; ಆಳುತನ: ಶೂರ, ದಿಟ್ಟ; ಧಿಮ್ಮನೆ: ಅನುಕರಣ ಶಬ್ದ; ನಿಂದು: ನಿಲ್ಲು;

ಪದವಿಂಗಡಣೆ:
ಖೂಳನನು +ಹಿಡಿತಂದು +ಧರಣೀ
ಪಾಲರಲಿ+ ಸರಿಮಾಡಿ +ರಾಜ್ಯದ
ಮೇಲೆ +ನಿಲಿಸಿದೆ +ಬಳಿಕ +ಬಂದುದು +ಖೂಳತನ+ ನಿನಗೆ
ಕೀಳು +ಮೇಲಿನ +ಸೀಮೆ +ನಿನ್ನಲಿ
ಬೀಳುಕೊಂಡುದು +ಸಾಕು +ನಮಗಿನ್
ಆಳುತನವೇಕ್+ಎನುತ +ಧಿಮ್ಮನೆ +ನಿಂದನಾ +ಶಲ್ಯ

ಅಚ್ಚರಿ:
(೧) ಕೀಳು, ಮೇಲು – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ