ಪದ್ಯ ೫: ದುರ್ಯೋಧನನು ಹೇಗೆ ಮಾತನ್ನು ಪ್ರಾರಂಭಿಸಿದನು?

ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ (ಕರ್ಣ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲ್ಲರೂ ಆ ದಿನದ ಯುದ್ಧವನ್ನು ಮುಗಿಸಿ ರಾತ್ರಿಯ ಹೊತ್ತು ಎಲ್ಲರು ಓಲಗದಲ್ಲಿ ಸೇರಿದರು, ಸೇನಾಧಿಪತಿ ಕರ್ಣ, ಶಕುನಿ, ಕೃಪಾಚಾರ್ಯರು, ಅಶ್ವತ್ಥಾಮ, ಮಂತ್ರಿಗಳು, ಸಾಮಂತರಾಜರು, ದುರ್ಯೋಧನಾದಿಯಾಗಿ ಸೇರಿದರು. ದುರ್ಯೋಧನನು ಮಾತನ್ನು ಮೆಲ್ಲನೆ ಪ್ರಾರಂಭಿಸುತ್ತಾ, ಈ ದಿನದ ಯುದ್ಧದಲ್ಲಿ ಪಾಂಡವರ ಆರ್ಭಟ ಹೆಚ್ಚಾಯಿತು ಎಂದು ಪ್ರಾರಂಭದ ನುಡಿಗಳನ್ನು ತೆಗೆದನು.

ಅರ್ಥ:
ಬಂದು: ಆಗಮಿಸು; ಇರುಳು: ರಾತ್ರಿ; ಓಲಗ: ದರ್ಬಾರು; ರಾಯ: ರಾಜ; ಮಂದಿ: ಜನ; ದಳಪತಿ: ಸೇನಾಧಿಪತಿ; ನಂದನ: ಮಗ; ಪ್ರತತಿ: ಸಮೂಹ; ಸಚಿವ: ಮಂತ್ರಿ; ಪಸಾಯಿತ: ಸಾಮಂತರಾಜ; ಸಹಿತ: ಜೊತೆ; ಇಂದಿನ: ಇವತ್ತು; ಆಹವ: ಯುದ್ಧ; ಬೊಬ್ಬಾಟ: ಜೋರು, ಆರ್ಭಟ; ಬಲುಹು: ಬಹಳ, ತುಂಬ; ಮೆಲ್ಲನೆ: ನಿಧಾನ; ಮಾತ: ನುಡಿ; ತೆಗೆ: ಪ್ರಾರಂಭಿಸು;

ಪದವಿಂಗಡಣೆ:
ಬಂದುದ್+ಇರುಳ್+ಓಲಗಕೆ +ರಾಯನ
ಮಂದಿ +ದಳಪತಿ+ ಶಕುನಿ+ ಕೃಪ +ಗುರು
ನಂದನಾದಿ +ಪ್ರತತಿ +ಸಚಿವ +ಪಸಾಯಿತರು +ಸಹಿತ
ಇಂದಿನ್+ಆಹವದೊಳಗೆ+ ಕುಂತೀ
ನಂದನರ +ಬೊಬ್ಬಾಟ +ಬಲುಹಾ
ಯ್ತೆಂದು +ಮೆಲ್ಲನೆ +ಮಾತ +ತೆಗೆದನು +ಕೌರವರ+ ರಾಯ

ಅಚ್ಚರಿ:
(೧) ರಾಯ – ೧, ೬ ಸಾಲಿನ ಕೊನೆ ಪದ
(೨) ಜೋಡಿ ಪದಗಳು – ಬೊಬ್ಬಾಟ ಬಲುಹಾಯ್ತೆಂದು; ಮೆಲ್ಲನೆ ಮಾತ

ನಿಮ್ಮ ಟಿಪ್ಪಣಿ ಬರೆಯಿರಿ