ಪೂತು ಮಝ ಧಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು (ಕರ್ಣ ಪರ್ವ, ೩ ಸಂಧಿ, ೧೨ ಪದ್ಯ)
ತಾತ್ಪರ್ಯ:
ಓಹೋ ಭಲೆ ಭಲೆ ಸೇನಾಪತಿಯು ಕೋಪ ಗೊಂಡಿರುವನಲ್ಲಾ, ನಮ್ಮ ಬಾಹುಬಲವು ಇದ್ದೇನು ಪ್ರಯೋಜನ? ಸಾತ್ಯಕಿಯನ್ನು ನಾವು ಸರಿಗಟ್ಟಬಲ್ಲವರೇ? ನಾವು ಶಿವನನ್ನು ಎದುರಿಸಬಲ್ಲ ಶಕ್ತಿಯುಳ್ಳ ಉತ್ತಮಕುಲದಲ್ಲಿ ಹುಟ್ಟಿರುವ ಶ್ರೇಷ್ಠರಲ್ಲವೇ ಎಂದು ಹೇಳುತ್ತಾ ಅಶ್ವತ್ಥಾಮಾದಿಗಳು ರಣರಂಗದಲ್ಲಿ ಮುಂದುವರೆದರು.
ಅರ್ಥ:
ಪೂತು: ಭಲೇ; ಮಝ:ಕೊಂಡಾಟದ ಒಂದು ಮಾತು; ದಳಪತಿ: ಸೇನಾಧಿಪತಿ; ಚಿತ್ತ: ಮನಸ್ಸು; ಖಾತಿ: ಕೋಪ, ಕ್ರೋಧ; ಕೊಬ್ಬು: ಸೊಕ್ಕು, ಅಹಂಕಾರ; ಭುಜಬಲ: ಶಕ್ತಿ, ಬಾಹುಬಲ; ಬಳಿಕ: ನಂತರ; ಸರಸ:ಚೆಲ್ಲಾಟ, ವಿನೋದ; ಭೂತನಾಥ: ಶಿವ; ಕಡು:ವಿಶೇಷ, ಅಧಿಕ; ತಡೆ: ನಿಲ್ಲಿಸು; ಅಭಿಜಾತ: ಶ್ರೇಷ್ಠವಾದ, ಉತ್ತಮಕುಲದಲ್ಲಿ ಹುಟ್ಟಿದವನು; ನಿಜ: ದಿಟ; ಸೂತ: ಸಾರಥಿ; ಬೋಳೈಸು: ಸಂತೈಸು, ಸಮಾಧಾನ ಮಾಡು; ನೂಕು: ತಳ್ಳು; ಗುರು: ಆಚಾರ್ಯ; ಸುತ: ಮಗ; ಗುರುಸುತ: ಅಶ್ವತ್ಥಾಮ; ಆದಿ: ಮುಂತಾದ;
ಪದವಿಂಗಡಣೆ:
ಪೂತು +ಮಝ +ಧಳಪತಿಯ +ಚಿತ್ತದ
ಖಾತಿ +ಕೊಬ್ಬಿತು +ನಮ್ಮ +ಭುಜಬಲವ್
ಏತಕಿದು +ಬಳಿಕೇನು +ಸಾತ್ಯಕಿ +ಸರಸವೇ +ತಮಗೆ
ಭೂತನಾಥನ+ ಕಡುಹ +ತಡೆವ್+ಅಭಿ
ಜಾತರಲ್ಲಾ +ತಾವೆನುತ +ನಿಜ
ಸೂತರನು +ಬೋಳೈಸಿ +ನೂಕಿತು +ಗುರುಸುತಾದಿಗಳು
ಅಚ್ಚರಿ:
(೧) ಶಿವನನ್ನು ಭೂತನಾಥ, ಅಶ್ವತ್ಥಾಮನನ್ನು ಗುರುಸುತ ಎಂದು ಕರೆದಿರುವುದು
(೨) ಕೊಂಡಾಟದ ಮಾತುಗಳ ಪ್ರಯೋಗ – ಪೂತು, ಮಝ