ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ (ಕರ್ಣ ಪರ್ವ, ೨ ಸಂಧಿ, ೬ ಪದ್ಯ)
ತಾತ್ಪರ್ಯ:
ರಥಗಳು ವೇಗದಿಂದ ಚಲಿಸಿದವು, ಶೂರರಾವುತರು ಹಗ್ಗಹಿಡಿದು ಕುದುರೆಗಳನ್ನೇರಿದರು, ಕಪ್ಪು ಮೋಡದ ಸೈನ್ಯವೆನ್ನುವಂತೆ ಆನೆಗಳು ಮುನ್ನುಗ್ಗಿದವು, ಅವರ ಗರ್ಜನೆಗೆ ನೆಲ ಬಿರಿಯಲು ಪೌರಕರು ಸಬಳವನ್ನು ಹಿಡಿದವರು ಬಿಲ್ಲುಗಾರರು ನುಗ್ಗಿ ಶತ್ರುಬಲವನ್ನು ಕೆಣಕಿದರು.
ಅರ್ಥ:
ತೇರು: ರಥ, ಬಂಡಿ; ಬಿಟ್ಟವು: ಹೊರಟವು; ಸೂಠಿ: ವೇಗ, ಚುರುಕುತನ; ಜಜ್ಝಾರ: ಶೂರ, ಧೀರ; ರಾವುತ: ಕುದುರೆ ಸವಾರ; ವಾಘೆ: ಲಗಾಮು; ಸರಿಸು: ಜರುಗಿಸು; ಏರು: ಹತ್ತು; ಕಾರ್ಮುಗಿಲು: ಕಪ್ಪು ಮೋಡಗಳು; ಬಲ: ಶಕ್ತಿ; ಕವಿದು: ಮುಸುಕು; ಆನೆ: ಗಜ; ಆರು: ಒಣಗು; ನೆಲ: ಭೂಮಿ; ಬಿರಿ: ಬಿರುಕು, ಸೀಳು; ಬೆರಸು: ಕೂಡಿಸು, ಮಿಶ್ರಮಾಡು ; ಪೌರ: ಪಟ್ಟಣಿಗ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಬಿಲ್ಲು: ಚಾಪ; ಭೂರಿ: ಹೆಚ್ಚು, ಅಧಿಕ;ಭಟರು: ಸೈನಿಕರು; ಇರಿ: ತಿವಿ; ಕೆಣಕು: ಪ್ರಚೋದಿಸು; ಕೆದರು: ಚದರಿಸು; ರಿಪು: ವೈರಿ; ಬಲ: ಸೈನ್ಯ;
ಪದವಿಂಗಡಣೆ:
ತೇರು+ ಬಿಟ್ಟವು +ಸೂಠಿಯಲಿ +ಜ
ಜ್ಝಾರ +ರಾವ್ತರು +ವಾಘೆ +ಸರಿಸದಲ್
ಏರಿದರು +ಕಾರ್ಮುಗಿಲ +ಬಲವೆನೆ +ಕವಿದವ್+ಆನೆಗಳು
ಆರಿದರೆ+ ನೆಲ +ಬಿರಿಯೆ +ಬೆರಸಿತು
ಪೌರಕರು+ ಸಬಳಿಗರು +ಬಿಲ್ಲಿನ
ಭೂರಿ +ಭಟರಳ್ಳಿರಿದು +ಕೆಣಕಿತು+ ಕೆದರಿ +ರಿಪುಬಲವ
ಅಚ್ಚರಿ:
(೧) ಜಜ್ಝಾರ – ಶೂರನೆಂದು ಹೇಳಲು ಬಳಸಿದ ಪದ
(೨) ಉಪಮಾನದ ಪ್ರಯೋಗ – ಕಾರ್ಮುಗಿಲ ಬಲವೆನೆ ಕವಿದವಾನೆಗಳು