ಪದ್ಯ ೨೫: ಕೃಪಾಚಾರ್ಯರು ಕರ್ಣನ ಸೇನಾಧಿಪಟ್ಟಕ್ಕೆ ಏನು ಹೇಳಿದರು?

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ
ಸಾಕಿ ಸಲಹಿದ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ (ಕರ್ಣ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿದ ಕೃಪಾಚಾರ್ಯರು, ಚರ್ಚೆ ಸಾಕು, ವೀರರನ್ನು ಸೇನಾಧಿಪತ್ಯಕ್ಕೆ ಕೂಡಿಸು, ಭೀಷ್ಮ, ದ್ರೋಣರೆಂಬ ಅತಿಶಯ ಪುಣ್ಯಶಾಲಿಗಳ ಮಾತೇಕೆ? ನೀನು ಕರ್ಣನನ್ನು ಸಾಕಿ ಸಲಹಿದವನು ಅದರಲ್ಲಿ ಮತ್ಸರವೇಕೆ? ಸೇನಾಧಿಪತ್ಯದ ಹೊಣೆ ಹೊರಲು ಸಮರ್ಥನಾಗಿದ್ದಾನೆ ಎಂದು ಹೇಳಿದರು.

ಅರ್ಥ:
ಸಾಕು: ನಿಲ್ಲಿಸು; ಅದಂತಿರಲಿ: ಹಾಗಿರಲಿ; ಥಟ್ಟು: ಸೈನ್ಯ, ಮೋಹರ; ಆಕೆವಾಳ: ಶೂರ, ಪರಾಕ್ರಮಿ; ಅಸ್ತೋಕ: ಅಧಿಕವಾದ; ಪುಣ್ಯ: ಸದಾಚಾರ; ಮಾತು: ನುಡಿ; ಗುರು: ಆಚಾರ್ಯ (ದ್ರೋಣ); ನದೀಸುತ: ಭೀಷ್ಮ; ಸುತ: ಮಗ; ಸಾಕು: ಬೆಳೆಸು, ಪೋಷಿಸು; ಸಲಹು: ಕಾಪಾಡು; ಹುರುಡು: ಪೈಪೋಟಿ, ಸ್ಪರ್ಧೆ; ಗುಣ: ನಡತೆ, ಸ್ವಭಾವ; ಅನೀಕ: ಸೈನ್ಯ; ಭಾರ: ಹೊಣೆ; ಹೊರಿಗೆ: ಹೊರಲು; ಗಹನ: ಗೌರವಸ್ಥ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು +ಥಟ್ಟಿಂಗ್
ಆಕೆವಾಳರ+ ಮಾಡು +ಸಾಕ್
ಅಸ್ತೋಕ+ಪುಣ್ಯರ +ಮಾತದೇತಕೆ+ ಗುರು +ನದೀಸುತರ
ಸಾಕಿ +ಸಲಹಿದ +ಕರ್ಣನನು +ಹುರು
ಡೇಕೆ +ಗುಣದೊಳಗ್+ಈತ +ಸೇನ
ಅನೀಕ+ಭಾರದ +ಹೊರಿಗೆ+ಗಹನೆಂದನು+ ಕೃಪಾಚಾರ್ಯ

ಅಚ್ಚರಿ:
(೧) ಸಾಕ್ – ೩ ಬಾರಿ ಪ್ರಯೋಗ
(೨) ಅಸ್ತೋಕ, ಆಕೆವಾಳ, ಅನೀಕ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ