ಪದ್ಯ ೧೫: ಸೋಲಿಗೆ ಯಾವ ಕಾರಣವೆಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು?

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡಾರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ (ಕರ್ಣ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗಳಿಗೆ ಸಂಜಯನು ಉತ್ತರಿಸುತ್ತಾ, ಕರ್ಣನ ರಥವು ಕುಗ್ಗಿ ಹೋಯಿತು, ಸಾರಥಿಯು ಮರ್ಮಗೆಡಿಸಿ ಭಂಗಿಸಿದನು. ಬಾಣಗಳ ಕೊರತೆ ಮೊದಲೇ ಆಗಿತ್ತು, ದೈವದ್ರೋಹಿಗಳಾದ ನೀವು ಶತ್ರುಗಳನ್ನು ಹೇಗೆ ಗೆಲ್ಲಲು ಸಾಧ್ಯ? ನಿಮ್ಮದು ಬರುಡಾದ ಮನಸ್ಸು ಆದ್ದರಿಂದ ನಿಮ್ಮ ವಂಶವನ್ನೇ ನಾಶಮಾಡಿದಿರಿ ಎಂದು ಸಂಜಯನು ತಲೆದೂಗುತ್ತಾ ತಿಳಿಸಿದನು.

ಅರ್ಥ:
ಹರುಹು: ವಿಸ್ತಾರ, ವೈಶಲ್ಯ; ತೇರು: ರಥ; ಸಾರಥಿ: ರಥವನ್ನು ಓಡಿಸುವವ; ಹುರುಳು:ತಿರುಳು, ಸಾರ, ಸಾಮರ್ಥ್ಯ; ಕೆಡಿಸು: ಹಾಳು ಮಾಡು; ನುಡಿ: ಮಾತು; ಅಂಬು: ಬಾಣ; ಕೊರತೆ: ನೂನ್ಯತೆ; ಮುನ್ನ: ಮುಂದಿನ; ದೈವ: ಭಗವಂತ; ದ್ರೋಹ: ವಿಶ್ವಾಸಘಾತ, ವಂಚನೆ; ಅರಿ: ರಿಪು, ವೈರಿ; ವಿಜಯ: ಗೆಲುವು; ಮನ: ಮನಸ್ಸು; ಬರಡು: ವ್ಯರ್ಥವಾದುದು; ಅನ್ವಯ: ಸಂಬಂಧ; ಸಂಹರಿಸು: ನಾಶಮಾಡು; ಸಾಕು: ನಿಲ್ಲಿಸು; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಹರುಹು+ಕೆಟ್ಟುದು +ತೇರು +ಸಾರಥಿ
ಹುರುಳು+ಕೆಡಿಸಿಯೆ +ನುಡಿದನ್+ಅಂಬಿನ
ಕೊರತೆ+ ತಾ +ಮುನ್ನಾಯ್ತು +ದೈವದ್ರೋಹಿಗಳು+ ನಿಮಗೆ
ಅರಿ+ವಿಜಯವ್+ಎಲ್ಲಿಯದು +ನೀವ್ +ಮನ
ಬರಡಾರೈ +ನಿಮ್ಮ+ಅನ್ವಯವ +ಸಂ
ಹರಿಸಿದಿರಿ+ ಸಾಕೆಂದು +ಸಂಜಯ +ತೂಗಿದನು +ಶಿರವ

ಅಚ್ಚರಿ:
(೧) ಹುರುಹು, ಹುರುಳು- ಪ್ರಾಸ ಪದಗಳು
(೨) ಸಂಜಯನು ಬಯ್ಯುವ ಪರಿ – ದೈವದ್ರೋಹಿಗಳು, ಬರಡಾರೈ, ಅನ್ವಯವ ಸಂಹರಿಸಿದಿರಿ

ನಿಮ್ಮ ಟಿಪ್ಪಣಿ ಬರೆಯಿರಿ