ಪದ್ಯ ೧೪: ಯಾವ ಕಾರಣಗಳನ್ನು ಧೃತರಾಷ್ಟ್ರ ಹುಡುಕುತಿದ್ದನು?

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (ಕರ್ಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತುಗಳನ್ನು ಮುಂದುವರೆಸುತ್ತಾ, ಏಕೆ ಹೀಗಾಯಿತು ನಮಗೆ, ಬಾಣಗಳ ಕೊರತೆಯೇ, ಸಾರಥಿಯ ಮತ್ಸವಏ, ರಥಕ್ಕೆ ಹೊಡೆತ ಬಿದ್ದು ಹಾಳಾಯಿತೇ? ಧನುಸ್ಸು ಮುರಿಯಿತೇ? ಮಹಾಸ್ತ್ರದ ವ್ಯಥೆಯೇ? ಕರ್ಣನನ್ನು ಹೇಗೆ ಕೊಂದರು? ಶತ್ರುಗಳಿಗೆ ನಮ್ಮನ್ನು ಕೊಲ್ಲುವ ಶಕ್ತಿ ಎಲ್ಲಿಂದ ಬರಬೇಕು? ನಮ್ಮ ಪಾಪ ಕರ್ಮಗಳಿಂದಾದ ಕಷ್ಟವೇ ನಮ್ಮನ್ನು ಕೆಡಿಸಿತು ಅಯ್ಯೋ ದೇವರೆ ಶಿವ ಶಿವಾ ಎಂದು ದುಃಖಿಸಿದನು ಧೃತರಾಷ್ಟ್ರ.

ಅರ್ಥ:
ಸರಳ: ಬಾಣ; ಕೊರತೆ: ನ್ಯೂನತೆ; ಸಾರಥಿ: ರಥ ಓಡಿಸುವವ; ಮತ್ಸರ: ಹೊಟ್ಟೆಕಿಚ್ಚು; ರಥ: ಬಂಡಿ; ವಿಘಾತಿ: ಹಾಳು; ದುರ್ಧರ: ಕಠಿಣವಾದ; ಧನುರ್ಭಂಗ: ಬಿಲ್ಲು ಮುರಿದ ಸ್ಥಿತಿ; ಅಸ್ತ್ರ: ಶಸ್ತ್ರ; ವ್ಯಥೆ: ದುಃಖ; ರವಿ: ಭಾನು; ಸುತ; ಮಗ; ಹುರುಳು: ಸತ್ವ, ಸಾಮರ್ಥ್ಯ; ಕೆಡಿಸು: ಹಾಳುಮಾಡು; ರಿಪು: ವೈರಿ; ರಾಯ: ರಾಜ; ಗೋಚರ: ಕಾಣಿಸು; ದುರಿತ: ದುಃಖ, ಕಷ್ಟ; ಉತ್ಕರ್ಷ: ಹೆಚ್ಚಳ; ಕೆಡಿಸು: ಹಾಳು; ಐಸಲೇ: ಅಲ್ಲವೇ;

ಪದವಿಂಗಡಣೆ:
ಸರಳ +ಕೊರತೆಯೊ+ ಸಾರಥಿಯ +ಮ
ತ್ಸರವೊ +ರಥದ +ವಿಘಾತಿಯೋ +ದು
ರ್ಧರ +ಧನುರ್ಭಂಗವೊ +ಮಹಾಸ್ತ್ರ+ವ್ಯಥೆಯೊ +ರವಿಸುತನ
ಹುರುಳು+ ಕೆಡಿಸಿದರೆಂತು +ರಿಪು +ರಾ
ಯರಿಗೆ+ ನಾವ್ +ಗೋಚರವೆ +ದುರಿತ
ಉತ್ಕರುಷವ್+ಐಸಲೆ +ನಮ್ಮ +ಕೆಡಿಸಿತು+ ಶಿವಶಿವಾ +ಎಂದ

ಅಚ್ಚರಿ:
(೧) ಕರ್ಣನನ್ನು ರವಿಸುತ ಎಂದು ಕರೆದಿರುವುದು
(೨) ಆಡು ಭಾಷೆಯ ಪದ ಪ್ರಯೋಗ – ಶಿವ ಶಿವಾ
(೩) ಕೊರತೆ, ಮತ್ಸರ, ವಿಘಾತಿ, ಭಂಗ, ವ್ಯಥೆ – ಪದಪ್ರಯೋಗಗಳು

ನಿಮ್ಮ ಟಿಪ್ಪಣಿ ಬರೆಯಿರಿ