ಪದ್ಯ ೧೩: ಧೃತರಾಷ್ಟ್ರನು ಯಾವ ವಿಷವಯವನ್ನು ತಿಳಿಯಲು ಬಯಸಿದನು?

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ (ಕರ್ಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುಃಖದಿಂದ ಧೃತರಾಷ್ಟ್ರ ಸಂಜಯನನ್ನು ಕೇಳುತ್ತಾ, ಭೀಷ್ಮ ಪಿತಾಮಹರು ಗಾಯಗೊಂಡು ಬಾಣಗಳ ಮೇಲೆ ಮಲಗಿದರು, ದ್ರೋಣಾಚಾರ್ಯರ ಪ್ರಾಣದ ತೊಟ್ಟು ಉದುರಿತು, ಕರ್ಣನು ನಮ್ಮನ್ನು ಈ ಸ್ಥಿತಿಗೆ ತಂದನು, ಇನ್ನೂ ದುರ್ಯೋಧನನು ಸಾಯಲಿಲ್ಲವೇ? ಹೋಗಲಿ ಆ ನಾಯಿಯ ಸುದ್ದಿ ಬೇಡ, ಕರ್ಣನು ಅಳಿದನೇ? ಆ ದುಃಖವಾರ್ತೆಯನ್ನು ವಿಸ್ತಾರವಾಗಿ ತಿಳಿಸು ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಘಾಯ: ನೋವು, ಹುಣ್ಣು; ಬಳಿಕ: ನಂತರ; ಆಯುಧ: ಶಸ್ತ್ರ; ಗುರು: ಆಚಾರ್ಯ; ತೊಡಬೆಗಳಚು: ಆಯುಧದ ಸಮೂಹವನ್ನು ಕಳಚು; ಅವಸ್ಥೆ: ಸ್ಥಿತಿ; ತಂದು: ಬರೆಮಾಡು; ಭಾನು: ಸೂರ್ಯ; ನಂದನ: ಮಗ; ಸಾಯನೇ: ಮರಣ ಹೊಂದಿದನೇ; ಮಗ: ಸುತ; ನಾಯ: ನಾಯಿ, ಶ್ವಾನ; ನುಡಿ: ಮಾತು; ಕಡೆ: ಕೊನೆ; ಶೋಕ: ದುಃಖ; ವಿಸ್ತರಿಸು: ವಿವರಣೆ, ವ್ಯಾಪ್ತಿ; ಹೇಳು: ತಿಳಿಸು;

ಪದವಿಂಗಡಣೆ:
ಘಾಯವಡೆದನು +ಭೀಷ್ಮ+ ಬಳಿಕಿನೊಳ್
ಆಯುಧದ +ಗುರು +ತೊಡಬೆಗಳಚಿದನ್
ಈ+ ಅವಸ್ಥೆಗೆ +ನಮ್ಮ +ತಂದನು +ಭಾನು+ನಂದನನು
ಸಾಯನೇ +ಮಗನ್+ಇನ್ನು +ಸಾಕ್+ಆ
ನಾಯ +ನುಡಿಯಂತಿರಲಿ+ ಕರ್ಣಂಗ್
ಆಯಿತೇ +ಕಡೆ +ಶೋಕವನು +ವಿಸ್ತರಿಸಿ+ ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ದುರ್ಯೋಧನನನ್ನು ಬಯ್ಯುವ ಪರಿ – ಸಾಕಾ ನಾಯ ನುಡಿಯಂತಿರಲಿ
(೨) ಕರ್ಣನನ್ನು ಭಾನುನಂದನ ಎಂದು ಕರೆದಿರುವುದು
(೩) ದ್ರೋಣರನ್ನು ಆಯುಧದ ಗುರು ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ