ಪದ್ಯ ೬: ಹಸ್ತಿನಾಪುರದ ಸ್ಥಿತಿ ಏನಾಯಿತು?

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನ ಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನಕವಾಟತತಿ ಗಾಳಾಯ್ತು ಗಜನಗರ (ಕರ್ಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸುದ್ದಿ ತಿಳಿಯುತ್ತಿದ್ದಂತೆ ರಾಣೀವಾಸದಲ್ಲಾದ ಅವ್ಯವಸ್ಥೆಯನ್ನು ನಾನು ಹೇಗೆ ಹೇಳಲಿ ಜನಮೇಜಯ. ಕರ್ಣನೇ ಮೊದಲಾದವರ ಪತ್ನಿಯೂ ಜೋರಾಗಿ ಅಳಲು ಪ್ರಾರಂಭಿಸಿದರು. ಈ ಅವ್ಯವಸ್ಥೆಯ ನಡುವೆ ಹಸ್ತಿನಾವತಿಯ ಊರೊಳಗಿನ ಕೊಳ್ಳೆಹೊಡೆಯುವವರು ಮುಂದಾದರು. ಕೋಟೆ ಕಾವಲಿನವರು ಗುಜುಗುಜು ಎಂದು ಮಾತಾಡಲು, ಮನೆ ಬಾಗಿಲುಗಲು ಮುಚ್ಚಿದವು, ಹಸ್ತಿನಾವತಿ ಕೆಟ್ಟು ಹೋಯಿತು.

ಅರ್ಥ:
ರವ: ಶಬ್ದ; ರವಕುಳ: ಅವ್ಯವಸ್ಥೆ, ಆಕ್ರಂದನ; ಹೇಳು: ತಿಳಿಸು; ಅವನಿ: ಭೂಮಿ; ಅವನಿಪತಿ: ರಾಜ; ಮೊದಲಾದ: ಮುಂತಾದ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಬಹಳ: ತುಂಬ; ಆಕ್ರಂದನ: ಅಳುವ ಧ್ವನಿ; ಧ್ವನಿ: ಶಬ್ದ; ಕವಿದು: ಆವರಿಸು; ಸೂರೆ: ಕೊಳ್ಳೆ, ಲೂಟಿ; ಒಳ: ಆಂತರ್ಯ; ಕೋಟೆ: ದುರ್ಗ; ತವಕಿಗ: ಉತ್ಸಾಹಿ, ಆತುರಗಾರ; ಗುಜುಗುಜು: ಬಿಸುಗುನುಡಿ; ಬಿಗಿ: ಬಂಧನ; ಭವನ: ಅರಮನೆ; ಕವಾಟ: ಬಾಗಿಲು; ಗಾಳ: ಕೊಕ್ಕೆ, ಕುತಂತ್ರ; ಗಜ: ಆನೆ; ನಗರ: ಊರು; ಗಜನಗರ: ಹಸ್ತಿನಾಪುರ; ತತಿ: ಗುಂಪು, ಸಮೂಹ;

ಪದವಿಂಗಡಣೆ:
ರವಕುಳವ +ನಾನೇನ +ಹೇಳುವೆನ್
ಅವನಿಪತಿಯಾ +ಕರ್ಣ +ಮೊದಲಾ
ದವರ+ ರಾಣೀವಾಸ +ಬಹಳ+ಆಕ್ರಂದನ +ಧ್ವನಿಯ
ಕವಿದುದ್+ಒಳಸೂರೆಗರು+ ಕೋಟೆಯ
ತವಕಿಗರು+ ಗುಜುಗುಜಿಸೆ +ಬಿಗಿದವು
ಭವನ+ ಭವನ+ಕವಾಟ+ತತಿ +ಗಾಳಾಯ್ತು +ಗಜನಗರ

ಅಚ್ಚರಿ:
(೧) ರಾಜನ ಅಳಿವಿನ ಬಳಿಕ ಯಾವ ರೀತಿ ಅರಾಜಕತೆ ಶುರುವಾಗುತ್ತದೆ ಎಂದು ತಿಳಿಸುವ ಪದ್ಯ
(೨) ಬ ಕಾರದ ತ್ರಿವಳಿ ಪದ – ಬಿಗಿದವು ಭವನ ಭವನಕವಾಟತತಿ

ನಿಮ್ಮ ಟಿಪ್ಪಣಿ ಬರೆಯಿರಿ