ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ (ಸಭಾ ಪರ್ವ, ೯ ಸಂಧಿ, ೩೩ ಪದ್ಯ)
ತಾತ್ಪರ್ಯ:
ಋಷಿಗಳು ಬಲಹೀನರು, ಬಡಬ್ರಾಹ್ಮಣರು ಒಳ್ಳೆಯ ಊಟ ದಕ್ಷಿಣೆಗಾಗಿ ಬಂದವರು. ಅಷ್ಟು ಸಿಕ್ಕರೆ ಅವರಿಗೆ ಸಾಕು. ಸ್ವಾಭಿಮಾನಕ್ಕಾಗಿ ಛಲದಿಂದ ಹೋರಾಡುವುದೂ, ನಾಶವಾದರೆ ಹೆಣಗುವುದೂ ಅವರಿಗೆ ತಿಳಿಯದು. ಇಲ್ಲಿ ಸೇರಿರುವ ಕ್ಷತ್ರಿಯರಾದರೋ ಸ್ವಾಭಿಮಾನಶಾಲಿಗಳಾಗಿದ್ದರೂ, ನಿನಗೆ ಅಗ್ರ ಪೂಜೆಯಾದುದನ್ನು ಕಂಡು ಸೈರಿಸಿದರು. ಅದನ್ನು ತಿಳಿಯದೆ ಅಗ್ರಪೂಜೆ ಮಾದಿಸಿಕೊಂಡು ಹಿಗ್ಗುವುದು ಅಷ್ಟು ಸುಲಭವೆಂದು ತಿಳಿದೆಯಾ?
ಅರ್ಥ:
ಋಷಿ: ಮುನಿ; ಬಣ: ಗುಂಪು; ಹಾರು: ಬ್ರಾಹ್ಮಣ, ವಿಪ್ರ; ದಕ್ಷಿಣೆ: ಸಂಭಾವನೆ, ಕಾಣಿಕೆ; ಸುಭೋಜನ: ಒಳ್ಳೆಯ ಊಟ; ಪೂರ: ಪೂರ್ತಿಯಾಗಿ; ಸಾಕು: ತೀರಿತು; ಮಾನ್ಯ: ಗೌರವಾನ್ವಿತ; ವಾಸಿವಟ್ಟ: ಉತ್ತಮ ಪದವಿ; ಹೋರು: ಹೊತ್ತುಕೊ; ನೆರೆ: ಗುಂಪು; ವೀರ: ಶೂರ; ನೃಪ: ರಾಜ; ಅಭಿಮಾನ: ಹೆಮ್ಮೆ, ಆತ್ಮಗೌರವ; ಸೈರಿಸು: ಸಹಿಸು, ತಾಳು; ಸದರ: ಸಲಿಗೆ, ಸಸಾರ;
ಪದವಿಂಗಡಣೆ:
ಈ +ಋಷಿಗಳೇ +ಬಣಗುಗಳು +ಬಡ
ಹಾರುವರು +ದಕ್ಷಿಣೆ +ಸುಭೋಜನ
ಪೂರವಾದರೆ+ ಸಾಕು +ಮಾನ್ಯರ+ ವಾಸಿವಟ್ಟದಲಿ
ಹೋರುವವರ್+ಇವರಲ್ಲ +ನೆರೆದ್+ಈ
ವೀರ+ನೃಪರ್+ಅಭಿಮಾನಿಗಳು +ನೆರೆ
ಸೈರಿಸಿದ್+ಅರಿದು +ನಿನಗೆ +ಸದರವೆ +ಕೃಷ್ಣ +ಹೇಳೆಂದ
ಅಚ್ಚರಿ:
(೧) ಹಾರುವರು, ಹೋರುವರು – ಪ್ರಾಸ ಪದ