ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣಕಥೆಯೀ
ಘೂರಿ ಭೋಜನವೀ ಮಹಾಗೋರತ್ನ ಧನಧಾನ್ಯ
ಸಾರತರ ವೇದೋಕ್ತ ಮಾರ್ಗವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ (ಸಭಾ ಪರ್ವ, ೯ ಸಂಧಿ, ೨೮ ಪದ್ಯ)
ತಾತ್ಪರ್ಯ:
ಇಲ್ಲಿ ನೆರೆದಿರುವ ಋಷಿಗಳ ಸಮೂಹ, ಅವರೆಲ್ಲರೂ ಹೇಳುವ ಮಂತ್ರಗಳು, ಅವರ ಸಾಧನಗಳು, ಪುರಾಣಕಥೆ, ಶ್ರೇಷ್ಠವಾದ ಭೋಜನ, ಅಪರಿಮಿತವಾದ ಗೋವುಗಳು, ರತ್ನಗಳು, ಧನ, ಧಾನ್ಯ, ಇದು ಸಾಲದೆಂಬಂತೆ ವೈದಿಕ ಮಾರ್ಗದಂತೆ ಯಜ್ಞ ನಡೆಯಿತು. ಆದರೆ ಇದೆಲ್ಲಾ ಕೃಷ್ಣನನ್ನು (ಗೋಪೀಜಾರ)ಸತ್ಕರಿಸುವುದಕ್ಕಾಗೆ ಮಾಡಿದ ಒಂದು ಮಾರ್ಗ, ಒಳಗೆ ಇಂತಹ ವಿಷಯ ಇದೆಯೆಂದು ನಮಗೆ ತಿಳಿದಿರಲಿಲ್ಲ ಎಂದು ಶಿಶುಪಾಲ ಜರಿದನು.
ಅರ್ಥ:
ಋಷಿ: ಮುನಿ, ಯೋಗಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಂಭಾರ: ಸಲಕರಣೆ; ಪೌರಾಣ: ಹಳೆಯದು, ಪ್ರಾಚೀನವಾದುದು; ಕಥೆ: ವಿಷಯವನ್ನು ಹೇಳುವ ರೀತಿ; ಭೂರಿ: ಹೆಚ್ಚು, ಅಧಿಕ; ಭೋಜನ: ಊಟ; ಮಹಾ: ಶ್ರೇಷ್ಠ; ರತ್ನ: ಮಣಿ; ಧನ: ಐಶ್ವರ್ಯ; ಧಾನ್ಯ: ಅಕ್ಕಿ, ಬೇಳೆ ಮುಂತಾದ ಪದಾರ್ಥ; ಸಾರ: ರಸ; ವೇದ: ಆಗಮ, ಜ್ಞಾನ; ಉಕ್ತ: ಹೇಳುವ; ಮಾರ್ಗ: ದಾರಿ; ವಿಚಾರ: ವಿಮರ್ಶೆ ; ಹೊರಗೆ: ಆಚೆ; ಜಾರ: ವ್ಯಭಿಚಾರಿ; ಸತ್ಕೃತಿ: ಒಳ್ಳೆಯ ಕೆಲಸ; ವಿಷ: ನಂಜು; ಅರಿ: ತಿಳಿ;
ಪದವಿಂಗಡಣೆ:
ಈ+ ಋಷಿಗಳೀ+ ಮಂತ್ರವೀ +ಸಂ
ಭಾರವೀ +ಪೌರಾಣಕಥೆಯೀ
ಘೂರಿ+ ಭೋಜನವೀ +ಮಹಾಗೋರತ್ನ +ಧನ+ಧಾನ್ಯ
ಸಾರತರ +ವೇದೋಕ್ತ +ಮಾರ್ಗ+ವಿ
ಚಾರವಿದ್ದುದು +ಹೊರಗೆ +ಗೋಪೀ
ಜಾರ+ ಸತ್ಕೃತಿಯೊಳಗೆ +ವಿಷವಿದನ್+ಅರಿದುದಿಲ್ಲೆಂದ
ಅಚ್ಚರಿ:
(೧) ಕೃಷ್ಣನನ್ನು ಗೋಪೀಜಾರನೆಂದು ಕರೆದಿರುವುದು
(೨) ಈ ಕಾರಗಳ ಪ್ರಯೋಗ – ಋಷಿಗಳೀ, ಮಂತವೀ, ಸಂಭಾರವೀ, ಕಥೆಯೀ, ಭೋಜನವೀ