ಪದ್ಯ ೩೮: ಪಾಂಡವರು ಯುದ್ಧರಂಗಕ್ಕೆ ಹೇಗೆ ಹೊರಟರು?

ಮುಂದೆ ಹರಿರಥವಸುರ ವೈರಿಯ
ಹಿಂದೆ ಧರ್ಮಜನೆಡಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು (ಉದ್ಯೋಗ ಪರ್ವ, ೧೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಬಾಗದಲ್ಲಿ ಶ್ರೀಕೃಷ್ಣನ ರಥ, ಅವನ ಹಿಂದೆ ಯುಧಿಷ್ಠಿರನು, ಅವನ ಎಡಬಲದಲ್ಲಿ ಪಾಂಡವರ ಮಕ್ಕಳು, ಬಲಭಾಗದ ಪಕ್ಕದಲ್ಲಿ ಭೀಮಾರ್ಜುನರು, ಹೀಗೆ ಹಲವಾರು ಮಂದಿ ರಥವೇರಿ ಸಿದ್ಧರಾದರು. ಸೈನ್ಯವೂ ಸೇರಿತು. ಈ ಭಾರಕ್ಕೆ ತಲೆ ಬಾಗಿಸದೆ ನೆಟ್ಟನಿದ್ದರೆ ಆದಿಶೇಷನಿಗೆ ಯಾರೂ ಸರಿಯಿಲ್ಲ ಎಂದು ದೇವತೆಗಳು ಮಾತನಾಡುತ್ತಿರಲು ಪಾಂಡವರು ಯುದ್ಧರಂಗಕ್ಕೆ ನಡೆದರು.

ಅರ್ಥ:
ಮುಂದೆ: ಅಗ್ರ, ಮೊದಲು; ರಥ: ಬಂಡಿ; ಅಸುರವೈರಿ: ರಾಕ್ಷರಸ ರಿಪು (ಕೃಷ್ಣ); ಹಿಂದೆ: ಹಿಂಬಾಗ; ಧರ್ಮಜ: ಯುಧಿಷ್ಠಿರ; ಎಡಬಲ: ಆಚೆಯೀಚೆ, ಪಕ್ಕದಲ್ಲಿ; ನಂದನ: ಮಕ್ಕಳು; ಕೆಲಬಲ: ಬಲಭಾಗದಲ್ಲಿ; ಆದಿ: ಮುಂತಾದವರು; ಸಂದಣಿ: ಗುಂಪು; ಸೇನೆ: ಸೈನ್ಯ; ಸೈರಿಸಿ: ತಾಳು, ಸಹಿಸು; ನಿಂದು: ನಿಲ್ಲು; ಫಣಿ: ಹಾವು; ಸರಿ: ಸದೃಶ, ತಪ್ಪಲ್ಲದ್ದು; ಸುರ: ದೇವತೆ; ಕುಲ: ವಂಶ; ಉಲಿ: ಧ್ವನಿ; ನಡೆ: ಸಾಗು;

ಪದವಿಂಗಡಣೆ:
ಮುಂದೆ +ಹರಿ+ರಥವ್+ಅಸುರ ವೈರಿಯ
ಹಿಂದೆ +ಧರ್ಮಜನ್+ಎಡಬಲದಲ್
ಆ+ನಂದನರು+ ಕೆಲಬಲದಲ್+ಆ+ ಭೀಮಾರ್ಜುನ+ಆದಿಗಳು
ಸಂದಣಿಸಿದುದು +ಸೇನೆ +ಸೈರಿಸಿ
ನಿಂದನಾದಡೆ+ ಫಣಿಗೆ+ ಸರಿಯಿ
ಲ್ಲೆಂದು+ ಸುರ+ಕುಲ+ಉಲಿಯೆ +ನಡೆದರು +ಪಾಂಡು+ನಂದನರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೈರಿಸಿ ನಿಂದನಾದಡೆ ಫಣಿಗೆ ಸರಿಯಿಲ್ಲೆಂದು ಸುರಕುಲವುಲಿಯೆ
(೨) ಹರಿ, ಅಸುರವೈರಿ – ಕೃಷ್ಣನಿಗೆ ಉಪಯೋಗಿಸಿದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ