ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರಭಾವದಲಿ (ಉದ್ಯೋಗ ಪರ್ವ, ೧೨ ಸಂಧಿ, ೨೭ ಪದ್ಯ)
ತಾತ್ಪರ್ಯ:
ರಾತ್ರಿಯ ಯುದ್ಧದಲ್ಲಿ ಅರ್ಜುನನಿಗೆ ಸೋತಿದ್ದ ಗಂಧರ್ವ ಅಂಗಾರವರ್ಮನು ಹೆಚ್ಚಿನ ಪರಿವಾರದೊಡನೆ ಧರ್ಮಜನನನ್ನು ಕಂಡು ಅವನ ಜೊತೆ ಸೇರಿದನು. ಘೋಷಯಾತ್ರೆಯಲ್ಲಿ ಕೌರವನನ್ನು ಸೆರೆ ಹಿಡಿದಿದ್ದ ಚಿತ್ರಸೇನನು ಮಿತ್ರಭಾವದಿಂದ ಪಾಂಡವರ ಜೊತೆಗೂಡಿದನು.
ಅರ್ಥ:
ವೀರ: ಶೂರ; ಪಾರ್ಥ: ಅರ್ಜುನ; ಇರುಳು: ರಾತ್ರಿ; ಸೋತು: ಪರಾಜಯ; ಗಗನಚರ: ಆಕಾಶದಲ್ಲಿ ಚಲಿಸುವ; ಗಗನ: ಆಕಾಶ; ಚರ: ಚಲಿಸುವ; ಪರಿವಾರ: ಕುಟುಂಬ, ಸಂಸಾರ; ಬಹಳ: ತುಂಬ;ಬಂದು: ಆಗಮಿಸಿ; ಕಂಡು: ನೋಡಿ; ಕಲಿ: ಶೂರ; ನೋಯಿಸು: ಬೇನೆ, ಅಳಲು; ಧುರ: ಯುದ್ಧ, ಕಾಳಗ; ಧೀರ: ಶೂರ; ಸಾಹಸ: ಪರಾಕ್ರಮ, ಶೌರ್ಯ; ಉದಾರ: ಧಾರಾಳ ಸ್ವಭಾವದ; ಗುಣ: ಸ್ವಭಾವ; ನಿಧಿ: ಐಶ್ವರ್ಯ; ಮಿತ್ರ: ಸ್ನೇಹ; ಭಾವ: ಭಾವನೆ;
ಪದವಿಂಗಡಣೆ:
ವೀರ+ ಪಾರ್ಥನಿಗ್+ಇರುಳು +ಸೋತ್+
ಅಂಗಾರವರ್ಮನು +ಗಗನಚರ+ ಪರಿ
ವಾರ +ಬಹಳದಿ +ಬಂದು +ಕಂಡನು +ಕಲಿ +ಯುಧಿಷ್ಠಿರನ
ಕೌರವೇಂದ್ರನ +ನೋಯಿಸಿದ+ ಧುರ
ಧೀರ +ಸಾಹಸ +ಚಿತ್ರಸೇನನ್
ಉದಾರ +ಗುಣನಿಧಿ+ ಬಂದು +ಕಂಡನು +ಮಿತ್ರ+ಭಾವದಲಿ
ಅಚ್ಚರಿ:
(೧) ವೀರ, ಧೀರ, ಕಲಿ – ಸಮನಾರ್ಥಕ ಪದ
(೨) ಬಂದು ಕಂಡನು – ೩, ೬ ಸಾಲಿನಲ್ಲಿ ಬರುವ ಪದಗಳು