ಪದ್ಯ ೨೫ : ಕೃಷ್ಣನ ವಿಶ್ವರೂಪ ದರ್ಶನ ಹೇಗಿತ್ತು?

ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿ ಶತ
ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನತೇ
ಜದಲಹರಿಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ (ಉದ್ಯೋಗ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರನು ಹೀಗೆ ಕೃಷ್ಣನ ಮಹಿಮೆಯನ್ನು ಹೇಳುತ್ತಿರಲು, ಕೃಷ್ಣನು ತನ್ನ ಪ್ರಕಾಶಮಾನವಾದ ದೇಹವನ್ನು ಕೊಡವಿ ನೆಟ್ಟನೆ ನಿಂತನು, ಮಿಂಚಿನ ಬಳ್ಳಿಗಳು ಹುರಿಗೊಂಡವೋ ಎಂಬಂತೆ ನೂರು ಸೂರ್ಯರು ಅವನ ದೇಹದಿಂದ ಉದುರಿದವು ಆ ತೇಜಸ್ಸಿನ ಹೊಳೆಯು ಆಸ್ಥಾನದ ಕಣ್ಣು ಕುಕ್ಕಿಸಿತು. ಶ್ರೀ ಕೃಷ್ಣನು ಆ ಮಹಾಸಭೆಗೆ ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಿಂಚು: ಹೊಳಪು, ಕಾಂತಿ; ಹೊದರು:ಬಿರುಕು; ಹುರಿಗೊಳ್ಳು:ಹೊಂದಿಕೊಳ್ಳು; ರವಿ: ಭಾನು, ಸೂರ್ಯ; ಶತ: ನೂರು; ಉದುರು: ಕೆಳಗೆ ಬೀಳು; ಮೈ: ತನು; ಮುರಿ:ಸೀಳು; ನಿಂದಡೆ: ನಿಲ್ಲು; ದೇವ: ಭಗವಂತ; ರಂಗ: ಸಭೆ; ಸದೆ: ಹೊಡೆ; ಆಸ್ಥಾನ: ಸಭೆ, ದರ್ಬಾರು; ಘನತೆ: ಪ್ರತಿಷ್ಠೆ; ತೇಜ: ಕಾಂತಿ; ಲಹರಿ: ಚುರುಕು, ಪ್ರಭೆ; ಲೀಲೆ:ಆನಂದ; ಹರಿ: ವಿಷ್ಣು; ತೋರು: ಕಾಣಿಸು; ನಿರುಪಮ:ಸಾಟಿಯಿಲ್ಲದ, ಅತಿಶಯವಾದ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಮಹಾ: ಶ್ರೇಷ್ಠ;

ಪದವಿಂಗಡಣೆ:
ವಿದುರನ್+ಇಂತೆನುತಿರಲು +ಮಿಂಚಿನ
ಹೊದರು +ಹುರಿಗೊಂಡಂತೆ+ ರವಿ +ಶತ
ಉದುರಿದವು+ ಮೈ +ಮುರಿದು +ನಿಂದಡೆ +ದೇವ+ರಂಗದಲಿ
ಸದೆದುದ್+ಆಸ್ಥಾನವನು +ಘನ+ತೇ
ಜದ+ಲಹರಿ+ಲೀಲೆಯಲಿ +ಹರಿ +ತೋ
ರಿದನು +ನಿರುಪಮ +ವಿಶ್ವರೂಪವನಾ +ಮಹಾಸಭೆಗೆ

ಅಚ್ಚರಿ:
(೧) ಸಭೆ, ಆಸ್ಥಾನ, ರಂಗ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ