ಪದ್ಯ ೨೪: ನೀಚರಿಗೆ ಕೃಷ್ಣನನ್ನು ಏಕೆ ಬಿಗಿಯಲಾಗದು?

ಸೂಚಿಸುವ ಶ್ರುತಿನಿಚಯ ಬರೆಬರೆ
ನಾಚಿದವು ವೇದಾಂತ ನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರಿವದಿರು ಬಿಗಿಯಲಳವೇ ಭೂಪ ಕೇಳೆಂದ (ಉದ್ಯೋಗ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಇವನನ್ನು ಹೇಳಲೆಂದು ಹೊರಟ ವೇದಗಳು, ಬರುತ್ತಾ ಬರುತ್ತಾ ಅದು ಸಾಧ್ಯವಾಗದೆ ನಾಚಿಗೊಂಡವು. ಉಪನಿಷತ್ತುಗಳು ನಿಜವನ್ನು ಕಾಣಿಸದೆ ಶಕ್ತಿಗುಂದಿ ನಿಂತವು. ಕರ್ಮದಿಂದ ಇದನ್ನು ಪಡೆಯಲು ಸಾಧ್ಯವಿಲ್ಲ. ಮುನಿಗಳಿಗೆ ಇವನು ಕಾಣಿಸದಾದನು, ಇಂತಹವನನ್ನು ಈ ನೀಚರು ಕಟ್ಟಿಹಾಕಲು ಸಾಧ್ಯವೇ ಎಂದು ವಿದುರ ಕೇಳಿದ.

ಅರ್ಥ:
ಸೂಚಿಸು:ತೋರಿಸು; ಶ್ರುತಿ: ವೇದ; ನಿಚಯ: ರಾಶಿ, ಗುಂಪು; ಬರೆ:ಸೀಮಾ; ನಾಚು: ಅವಮಾನ ಹೊಂದು; ವೇದಾಂತ: ಉಪನಿಷತ್ತುಗಳು; ವಾಚನ: ಓದುವುದು, ಪಠಣ; ಅಳವಳಿ: ಶಕ್ತಿಗುಂದು; ನಿಂದು: ನಿಲ್ಲು; ನಿಜ: ದಿಟ; ಕಾಣಿಸು: ತೋರು; ಆಚರಿಸು: ಮಾಡು; ಮುನಿ: ಋಷಿ; ಗೋಚರ: ತೋರು; ಮನ: ಮನಸ್ಸು; ಹರಿ: ವಿಷ್ಣು; ನೀಚ: ಕೆಟ್ಟ, ದುಷ್ಟ; ಅರಿ: ತಿಳಿ; ಬಿಗಿ:ಕಟ್ಟು; ಅಳವು: ಶಕ್ತಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೂಚಿಸುವ +ಶ್ರುತಿ+ನಿಚಯ +ಬರೆಬರೆ
ನಾಚಿದವು+ ವೇದಾಂತ +ನಿಚಯದ
ವಾಚನೆಗಳ್+ಅಳವಳಿದು +ನಿಂದವು +ನಿಜವ+ ಕಾಣಿಸದೆ
ಆಚರಿಸಲ್+ಅಳವಲ್ಲ +ಮುನಿಗಳ
ಗೋಚರಕೆ +ಮನಗುಡದ +ಹರಿಯನು
ನೀಚ್+ಅರಿವದಿರು +ಬಿಗಿಯಲ್+ಅಳವೇ +ಭೂಪ +ಕೇಳೆಂದ

ಅಚ್ಚರಿ:
(೧) ವೇದ, ಉಪನಿಷತ್ತು ಮತ್ತು ಮುನಿಗಳಿಗೆ ಗೋಚರಿಸದ ಕೃಷ್ಣ ಎಂದು ತಿಳಿಸುವ ಪದ್ಯ

ನಿಮ್ಮ ಟಿಪ್ಪಣಿ ಬರೆಯಿರಿ