ಪದ್ಯ ೧೪: ವಿದುರ ಯಾವ ಉಪಮಾನವನ್ನು ನೀಡಿ ಧೃತರಾಷ್ಟ್ರನಿಗೆ ಬುದ್ಧಿ ಹೇಳಿದ?

ಎಲೆ ಮರುಳೆ ಧೃತರಾಷ್ಟ್ರ ನಂಟಿನ
ಬಳಕೆವಾತಿನ ಬಂಧುಕೃತ್ಯದ
ಬಳವಿಗೆಯೊಳೀ ನಿನ್ನ ಮಕ್ಕಳ ಬೇಡಿಕೊಳಲೇಕೆ
ಮುಳಿದು ಬಗುಳುವ ನಾಯ್ಗೆ ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳಿಸುವುದೆ ಕಲಿ ಸಿಂಹವೆಂದನು ಖಾತಿಯೊಳು ವಿದುರ (ಉದ್ಯೋಗ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಎಲೈ ಮೂಢ ಧೃತರಾಷ್ಟ್ರ ನಂಟು, ಸಂಬಂಧ, ಬಂಧುಕೃತ್ಯಗಳ ಬಳಕೆಯ ಮಾತಿನಲ್ಲಿ ನಿನ್ನ ಮಕ್ಕಳನ್ನು ಬೇಡಿಕೊಳ್ಳುವುದರಲ್ಲಿ ಅರ್ಥವಿಲ್ಲ, ಅದು ಹುಚ್ಚುತನದ ಪ್ರಯತ್ನ. ನಾಯಿಯು ಸಿಟ್ಟಿನಿಂದ ಬೊಗಳಿದರೆ ಚಂದ್ರನು ಬೆದರುವನೆ? ನರಿಯು ಕಿರುಚಿಕೊಂಡರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಎಂದು ಕೋಪದಿಂದ ವಿದುರನು ಹೇಳಿದನು.

ಅರ್ಥ:
ಮರುಳು: ಮೂಢ, ಮೂರ್ಖ; ನಂಟು: ಸಂಬಂಧ; ಬಳಕೆ: ಉಪಯೋಗ; ಬಂಧು:ಸಂಬಂಧಿಕ; ಬಳಕೆ: ಗುರುತು, ಕ್ರಮ; ಮಕ್ಕಳು: ಸುತರು; ಬೇಡಿಕೊಳ್ಳು:ಯಾಚಿಸು, ಬಯಸು; ಮುಳಿ: ಸಿಟ್ಟು, ಕೋಪ; ಬಗುಳು: ಅರಚು; ನಾಯಿ: ಶ್ವಾನ; ಚಂದ್ರ: ಇಂದು, ಶಶಿ; ಅಳುಕು: ಹೆದರು; ಒರಲು: ಅರಚು; ಕಳವಳ:ಗೊಂದಲ, ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಖಾತಿ: ಕೋಪ;

ಪದವಿಂಗಡಣೆ:
ಎಲೆ +ಮರುಳೆ +ಧೃತರಾಷ್ಟ್ರ +ನಂಟಿನ
ಬಳಕೆವಾತಿನ+ ಬಂಧು+ಕೃತ್ಯದ
ಬಳವಿಗೆಯೊಳ್+ಈ+ ನಿನ್ನ+ ಮಕ್ಕಳ+ ಬೇಡಿಕೊಳಲ್+ಏಕೆ
ಮುಳಿದು +ಬಗುಳುವ +ನಾಯ್ಗೆ +ಚಂದ್ರಮನ್
ಅಳುಕುವನೆ+ ನರಿ+ಒರಲಿದೊಡೆ +ಕಳ
ವಳಿಸುವುದೆ +ಕಲಿ +ಸಿಂಹವ್+ಎಂದನು +ಖಾತಿಯೊಳು +ವಿದುರ

ಅಚ್ಚರಿ:
(೧) ಉಪಮಾನಗಳ ಬಳಕೆ – ಮುಳಿದು ಬಗುಳುವ ನಾಯ್ಗೆ ಚಂದ್ರಮನಳುಕುವನೆ; ನರಿಯೊರಲಿದೊಡೆ ಕಳವಳಿಸುವುದೆ ಕಲಿ ಸಿಂಹ
(೨) ಬಂಧು, ನೆಂಟ – ಸಾಮ್ಯಾರ್ಥಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ