ಎಲೆ ಮರುಳೆ ಧೃತರಾಷ್ಟ್ರ ನಂಟಿನ
ಬಳಕೆವಾತಿನ ಬಂಧುಕೃತ್ಯದ
ಬಳವಿಗೆಯೊಳೀ ನಿನ್ನ ಮಕ್ಕಳ ಬೇಡಿಕೊಳಲೇಕೆ
ಮುಳಿದು ಬಗುಳುವ ನಾಯ್ಗೆ ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳಿಸುವುದೆ ಕಲಿ ಸಿಂಹವೆಂದನು ಖಾತಿಯೊಳು ವಿದುರ (ಉದ್ಯೋಗ ಪರ್ವ, ೧೦ ಸಂಧಿ, ೧೪ ಪದ್ಯ)
ತಾತ್ಪರ್ಯ:
ಎಲೈ ಮೂಢ ಧೃತರಾಷ್ಟ್ರ ನಂಟು, ಸಂಬಂಧ, ಬಂಧುಕೃತ್ಯಗಳ ಬಳಕೆಯ ಮಾತಿನಲ್ಲಿ ನಿನ್ನ ಮಕ್ಕಳನ್ನು ಬೇಡಿಕೊಳ್ಳುವುದರಲ್ಲಿ ಅರ್ಥವಿಲ್ಲ, ಅದು ಹುಚ್ಚುತನದ ಪ್ರಯತ್ನ. ನಾಯಿಯು ಸಿಟ್ಟಿನಿಂದ ಬೊಗಳಿದರೆ ಚಂದ್ರನು ಬೆದರುವನೆ? ನರಿಯು ಕಿರುಚಿಕೊಂಡರೆ ಸಿಂಹಕ್ಕೆ ಕಳವಳವಾಗುತ್ತದೆಯೇ? ಎಂದು ಕೋಪದಿಂದ ವಿದುರನು ಹೇಳಿದನು.
ಅರ್ಥ:
ಮರುಳು: ಮೂಢ, ಮೂರ್ಖ; ನಂಟು: ಸಂಬಂಧ; ಬಳಕೆ: ಉಪಯೋಗ; ಬಂಧು:ಸಂಬಂಧಿಕ; ಬಳಕೆ: ಗುರುತು, ಕ್ರಮ; ಮಕ್ಕಳು: ಸುತರು; ಬೇಡಿಕೊಳ್ಳು:ಯಾಚಿಸು, ಬಯಸು; ಮುಳಿ: ಸಿಟ್ಟು, ಕೋಪ; ಬಗುಳು: ಅರಚು; ನಾಯಿ: ಶ್ವಾನ; ಚಂದ್ರ: ಇಂದು, ಶಶಿ; ಅಳುಕು: ಹೆದರು; ಒರಲು: ಅರಚು; ಕಳವಳ:ಗೊಂದಲ, ಚಿಂತೆ; ಕಲಿ: ಶೂರ; ಸಿಂಹ: ಕೇಸರಿ; ಖಾತಿ: ಕೋಪ;
ಪದವಿಂಗಡಣೆ:
ಎಲೆ +ಮರುಳೆ +ಧೃತರಾಷ್ಟ್ರ +ನಂಟಿನ
ಬಳಕೆವಾತಿನ+ ಬಂಧು+ಕೃತ್ಯದ
ಬಳವಿಗೆಯೊಳ್+ಈ+ ನಿನ್ನ+ ಮಕ್ಕಳ+ ಬೇಡಿಕೊಳಲ್+ಏಕೆ
ಮುಳಿದು +ಬಗುಳುವ +ನಾಯ್ಗೆ +ಚಂದ್ರಮನ್
ಅಳುಕುವನೆ+ ನರಿ+ಒರಲಿದೊಡೆ +ಕಳ
ವಳಿಸುವುದೆ +ಕಲಿ +ಸಿಂಹವ್+ಎಂದನು +ಖಾತಿಯೊಳು +ವಿದುರ
ಅಚ್ಚರಿ:
(೧) ಉಪಮಾನಗಳ ಬಳಕೆ – ಮುಳಿದು ಬಗುಳುವ ನಾಯ್ಗೆ ಚಂದ್ರಮನಳುಕುವನೆ; ನರಿಯೊರಲಿದೊಡೆ ಕಳವಳಿಸುವುದೆ ಕಲಿ ಸಿಂಹ
(೨) ಬಂಧು, ನೆಂಟ – ಸಾಮ್ಯಾರ್ಥಪದಗಳು