ಪದ್ಯ ೧೦: ಮಗನ ಕಪಟವನು ಕೇಳಿ ಧೃತರಾಷ್ಟ್ರನು ಹೇಗೆ ಬೇಸರಗೊಂಡನು?

ಅವನಿಪತಿ ಕೇಳಿದನು ಕನಲಿದು
ಶಿವಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಳ್ವ ಗಾಂಧಾರಿಯನು ಕರೆಯೆಂದ (ಉದ್ಯೋಗ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮರು ಹೇಳಿದ ಮಾತುಗಳನ್ನು ಕೇಳಿದ ಧೃತರಾಷ್ಟ್ರ ಬೇಸರಗೊಂಡು ಶಿವಶಿವ ಇವನು ನನ್ನ ಮಗನೇ ಎಂದು ಸಂಕಟಪಟ್ಟನು, ಅಲ್ಲಾ ಇವನು ಭರತವಂಶಕ್ಕೆ ಮೃತ್ಯುವಾಗಿರುವನಲ್ಲಾ! ವಿದುರನನ್ನು ಬರೆಮಾಡಲು ಹೇಳಿ, ಗಾಂಧಾರಿಯನ್ನು ಇಲ್ಲಿಗೆ ಬರಲು ಹೇಳು, ಅವಳ ಮಗನ ಆಟವನ್ನು ಆಕೆಯೂ ನೋಡಲಿ, ಮಗನನ್ನು ಎಂತಹ ಮೋಹದಿಂದ ಹೆತ್ತಳೋ ಕೇಳೋಣ ಎಂದು ಗಾಂಧಾರಿಯನ್ನು ಬರಲು ಹೇಳಿದನು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಕೇಳು: ಆಲಿಸು; ಕನಲು:ಸಂಕಟಪಡು; ಕರೆ: ಬರೆಮಾಡು; ಮೃತ್ಯು: ಸಾವು; ಸಂತತಿ: ವಂಶ; ಬರಹೇಳು: ಆಗಮಿಸು, ಬರೆಮಾಡು; ಆಟ: ಸೋಗು, ಉಪಾಯ; ನೋಡು: ವೀಕ್ಷಿಸು; ಹೆತ್ತ: ಜನ್ಮನೀಡಿದ; ಮೋಹ: ಆಸೆ; ಹವಣು:ನಿಯಮ, ಕಾರ್ಯ; ಬೆಸಗೊಳ್ಳು:ಕೇಳುವುದು;

ಪದವಿಂಗಡಣೆ:
ಅವನಿಪತಿ +ಕೇಳಿದನು +ಕನಲಿದು
ಶಿವಶಿವೆಂದನು +ವಿದುರ+ ಕರೆ+ ಕೌ
ರವನು +ಮಗನೇ +ಮೃತ್ಯುವಲ್ಲಾ +ಭರತ +ಸಂತತಿಗೆ
ಅವಳ+ ಬರಹೇಳ್+ಇತ್ತ +ಮಗನ
ಆಟವನು +ನೋಡಲಿ +ಹೆತ್ತ +ಮೋಹದ
ಹವಣುಗಳ+ ಬೆಸಗೊಳ್ವ +ಗಾಂಧಾರಿಯನು +ಕರೆಯೆಂದ

ಅಚ್ಚರಿ:
(೧) ಶಿವಶಿವ – ಆಡು ಭಾಷೆಯ ಪ್ರಯೋಗ
(೨) ಬರಹೇಳು, ಕರೆ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ