ಪದ್ಯ ೨೭: ದುರ್ಯೋಧನನು ಯಾವ ರಾಶಿಯವನೆಂದು ಹೇಳಿದನು?

ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ (ಉದ್ಯೋಗ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರ ಮಾತು, ವಸಿಷ್ಠರ ಹಿತವಚನ, ವಿದ್ವಾಂಸರಾದ ಕೌಶಿಕ ಮುನಿಗಳ ವಿಚಾರ ಯಾವುದು ಸುಯೋಧನನ ಕಿವಿಗೆ ಬೀಳಲಿಲ್ಲ, ಅವರ ಮಾತನ್ನೊಪ್ಪದೆ ಪಾಂಡವರಿಗೆ ಭೂಮಿಯನ್ನು ಕೊಡವ ಅಭ್ಯಾಸ ನನಗಿಲ್ಲ, ನಾನು ಅನೀತಿಯ ರಾಶಿಯವನು, ನನ್ನನ್ನೇಕೆ ಒಪ್ಪಿಸಲು ಬರುತ್ತಿರುವಿರಿ ಎಂದು ಪ್ರಶ್ನಿಸಿದನು.

ಅರ್ಥ:
ವಚನ: ಮಾತು; ಮುನಿ: ಋಷಿ; ಮುನೀಶ: ಮುನಿಗಳಲ್ಲಿ ಶ್ರೇಷ್ಠನಾದವ; ಒಳು: ಒಳಿತು; ನುಡಿ: ಮಾತು; ಕೋವಿದ: ವಿದ್ವಾಂಸ; ಕಥನ: ವಿಚಾರ; ಕೈಕೊಳ್ಳು: ಒಪ್ಪಿಕೊ; ದೇಶ: ರಾಷ್ಟ್ರ; ಅಭ್ಯಾಸ: ರೂಢಿ; ಅನೀತಿ: ಕೆಟ್ಟ ಮಾರ್ಗ; ರಾಶಿ:ಗುಂಪು; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ವ್ಯಾಸ+ ವಚನವನ್+ಆ+ ವಸಿಷ್ಠ+ ಮು
ನೀಶನ್+ಒಳುನುಡಿಗಳನು +ಕೋವಿದ
ಕೌಶಿಕನ +ಕಥನವನು +ಕೈಕೊಳ್ಳದೆ +ಸುಯೋಧನನು
ದೇಶವನು +ಪಾಂಡವರಿಗ್+ಈವ್
ಅಭ್ಯಾಸವ್+ಎಮ್ಮೊಳಗ್+ಇಲ್ಲ್+ಅನೀತಿಯ
ರಾಶಿಯಾನಹೆನ್+ಎನ್ನನೊಡಬಡಿಸುವಿರಿ+ ನೀವೆಂದ

ಅಚ್ಚರಿ:
(೧) ‘ಕ’ ಕಾರದ ಸಾಲು ಪದಗಳು – ಕೋವಿದ ಕೌಶಿಕನ ಕಥನವನು ಕೈಕೊಳ್ಳದೆ
(೨) ‘ವ’ಕಾರದ ತ್ರಿವಳಿ ಪದ – ವ್ಯಾಸ ವಚನವನಾ ವಸಿಷ್ಠ
(೩) ವಚನ, ನುಡಿ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ