ಪದ್ಯ ೫: ರಾಜನೀತಿಯಲ್ಲಿ ಯಾವುದು ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ?

ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದೊಳು ಸಾಮಾನ್ಯ ತರವೆಂದ (ಉದ್ಯೋಗ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಒಡಂಬಡಿಕೆಯ ಕ್ರಮವು ರಾಜನೀತಿಯಲ್ಲಿ ಬಹು ಸುಂದರವಾದ ಉಪಾಯ. ವೈಭವದಿಂದ ಬದುಕಲಿಚ್ಛಿಸುವ ರಾಜರೆಲ್ಲರೂ ಇದು ಬೀಜ ಮಂತ್ರ. ಸಾಮವು ತಪ್ಪಿದರೆ ನೀತಿಯು ನೆಲೆಯಿಲ್ಲದಂತಾಗುತ್ತದೆ. ದಂಡವು ಉಪಾಯಗಳಲ್ಲಿ ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ ಎಂದು ಕೃಷ್ಣನು ಹೇಳಿದನು.

ಅರ್ಥ:
ಸಾಮ: ಶಾಂತಗೊಳಿಸುವಿಕೆ, ಒಡಂಬಡಿಕೆ; ರಾಜನೀತಿ: ರಾಜಕಾರಣ; ಮನೋಹರ: ಸುಂದರವಾದ; ರೂಪು:ಆಕಾರ; ಬದುಕು: ಜೀವಿಸುವ; ಭೂಮಿಪಾಲ: ರಾಜ; ವಿನುತ: ಹೊಗಳಲ್ಪಟ್ಟ; ವಿಭವ: ಸಿರಿ, ಸಂಪತ್ತು; ಬೀಜ:ಮೂಲ ಕಾರಣ; ಮಂತ್ರ: ವಿಚಾರ; ತಪ್ಪು: ಸುಳ್ಳಾಗು; ಬಳಿಕ: ನಂತರ; ವಿರಾಮ: ಬಿಡುವು, ವಿಶ್ರಾಂತಿ; ಬಿಡದು: ಬಿಡು ಗಡೆ; ದಂಡ: ಕೋಲು; ಸೀಮೆ:ಎಲ್ಲೆ, ಗಡಿ; ಉಪಾಯ: ಯುಕ್ತಿ; ಸಾಮಾನ್ಯ: ಕೇವಲ; ತರ:ಕ್ರಮ;

ಪದವಿಂಗಡಣೆ:
ಸಾಮವೆಂಬುದು+ ರಾಜನೀತಿಗೆ
ತಾ +ಮನೋಹರ +ರೂಪು +ಬದುಕುವ
ಭೂಮಿಪಾಲರ+ ವಿನುತ +ವಿಭವಕೆ +ಬೀಜ +ಮಂತ್ರವಿದು
ಸಾಮ +ತಪ್ಪಿದ +ಬಳಿಕ +ನೀತಿ +ವಿ
ರಾಮವಾಗದೆ+ ಬಿಡದು +ದಂಡದ
ಸೀಮೆಯೆಂಬುದ್+ಉಪಾಯದೊಳು +ಸಾಮಾನ್ಯ +ತರವೆಂದ

ಅಚ್ಚರಿ:
(೧) ಚತುರೋಪಾಯದ ವಿವರ ನೀಡುವ ಪದ್ಯ – ಸಾಮ, ದಾನ, ಭೇದ, ದಂಡ
(೨) ಸಾಮದ ಗುಣಗಾನ – ಸಾಮವೆಂಬುದು ರಾಜನೀತಿಗೆ ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು

ನಿಮ್ಮ ಟಿಪ್ಪಣಿ ಬರೆಯಿರಿ