ಪದ್ಯ ೬೦: ದುರ್ಯೋಧನನು ತನ್ನ ಪಾದಕ್ಕೆ ಬಿದ್ದುದನ್ನು ನೋಡಿ ಕೃಷ್ಣನು ಏನು ಹೇಳಿದನು?

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ (ಉದ್ಯೋಗ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೂಮಿಯನ್ನಾಳುವ ರಾಜನು ಸಿಂಹಾಸನದ ಮೇಲಿರದೆ ಹೀಗೆ ನನ್ನ ಕಾಲ ಬಳಿ ಎರಗುವುದು ಸರಿಯೇ, ಅಯ್ಯೋ ತಾಪ್ಪಾಯಿತಲ್ಲ, ನಾವೆ ನಿಮ್ಮ ಬಳಿ ಬಂದು ಆಶೀರ್ವದಿಸುತ್ತಿದ್ದೆವು ಎಂದು ಹೇಳುತ್ತಾ ದುರ್ಯೋಧನನ ತಲೆಯನ್ನು ಸವರಿಸುತ್ತಾ ಮೇಲೇಳಿಸಿದನು. ಭೀಷ್ಮರು ತಮ್ಮ ಹಸ್ತವನ್ನು ಚಾಚಿ ಕೃಷ್ಣನ ಆಸನವನ್ನು ತೋರಲು, ಕೃಷ್ಣನು ತನ್ನ ಸಿಂಹಾಸನಕ್ಕೆ ಬರಲು ಕುರುಕುಲದ ಶ್ರೇಷ್ಠರಿಂದ ಸನ್ಮಾನವನ್ನು ಸ್ವೀಕರಿಸಿದನು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಆಸನ; ಮೇಲೆ: ಅಗ್ರಭಾಗ; ಬಹರು: ಬರುವುದು; ಹರಸು: ಆಶೀರ್ವದಿಸು; ತಪ್ಪು: ಸರಿಯಾಗದ; ಎತ್ತು: ಮೇಲೇಳಿಸು; ಮಸ್ತಕ: ಶಿರ, ತಲೆ; ಸುರನದಿ: ಗಂಗೆ; ಸುತ: ಮಗ; ಸುರನದೀಸುತ: ಭೀಷ್ಮ; ಕೈ: ಹಸ್ತ; ಕೈಗುಡಲು: ಹಸ್ತವನ್ನು ನೀಡಲು; ಕೇಸರಿ: ಸಿಂಹ; ಪೀಠ: ಆಸನ; ದೇವ: ಭಗವಂತ; ಬಂದು: ಆಗಮಿಸು; ಅಗ್ರಣಿ: ಶ್ರೇಷ್ಠರು; ಕುಲ: ವಂಶ; ಸನ್ಮಾನ: ಗೌರವ; ಕೈಕೊಳುತ: ಸ್ವೀಕರಿಸು;

ಪದವಿಂಗಡಣೆ:
ಧರಣಿಪತಿ +ಸಿಂಹಾಸನದ+ ಮೇ
ಲಿರದೆ +ಬಹರೇ +ನಾವು +ಬಂದೇ
ಹರಸುವೆವು +ತಪ್ಪಾವುದ್+ಎನುತ್+ಎತ್ತಿದನು +ಮಸ್ತಕವ
ಸುರನದೀಸುತ +ಕೈಗುಡಲು +ಕೇ
ಸರಿಯ +ಪೀಠಕೆ +ದೇವ +ಬಂದನು
ಕುರುಕುಲ+ಅಗ್ರಣಿಗಳ+ ಸುಸನ್ಮಾನವನು +ಕೈಕೊಳುತ

ಅಚ್ಚರಿ:
(೧) ಸಿಂಹಾಸನ, ಕೇಸರಿಯ ಪೀಠ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ