ಕಲಿಮಲದಿ ಹೊಲೆಗಲಸಿದಿಭಪುರಿ
ಯೊಳಗೆ ನಿರ್ಮಳವಾಯ್ತು ಕೃಷ್ಣನ
ಚೆಲುವ ದರುಶನದಿಂದ ಬೆಂದವು ಭವದ ಭಯಬೀಜ
ಲಲನೆಯರು ತಮತಮ್ಮ ನಯನಂ
ಗಳಿಗೆ ದೇವನ ತೆಗೆದು ಸನುಮತ
ಪುಳಕರಾದರು ಕೇಳು ಜನಮೇಜಯ ಮಹೀಪಾಲ (ಉದ್ಯೋಗ ಪರ್ವ, ೮ ಸಂಧಿ, ೫೦ ಪದ್ಯ)
ತಾತ್ಪರ್ಯ:
ಕಲಿಕಾಲದ ಕಲ್ಮಶಗಳಿಂದ ಕೂಡಿದ ಹಸ್ತಿನಾಪುರವು ಕೃಷ್ಣನ ಆಗಮನದಿಂದ ಪಾವನಗೊಂಡಿತು, ಕೃಷ್ಣನ ಸುಂದರ ರೂಪವನ್ನು ನೋಡಿ ಭವಸಾಗರದ ಭಯವು ದೂರವಾಯಿತು, ಸುಂದರಿಯರು ತಮ್ಮ ನಯನಗಳಿಂದ ಕೃಷ್ಣನ ದಿವ್ಯ ಸ್ವರೂಪವನ್ನು ಅಚ್ಚಿಳಿಸಿ ಒಳ್ಳೆಯ ಭಾವನೆಗಳಿಂದ ಆನಂದಭರಿತರಾದರು ಎಂದು ವೈಶಂಪಾಯನರು ಜನಮೇಜಯ ಮಹಾರಾಜನಿಗೆ ಹೇಳಿದರು.
ಅರ್ಥ:
ಕಲಿಮಲ: ಕಲಿಕಾಲದ ದುಷ್ಟ ವಾಸನೆಗಳು; ಹೊಲೆ:ಕೊಳಕು; ಇಭಪುರಿ: ಹಸ್ತಿನಾಪುರ; ನಿರ್ಮಳ: ಸ್ವಚ್ಛ; ಚೆಲುವು: ಸೌಂದರ್ಯ; ದರುಶನ: ನೋಟ; ಬೆಂದು: ಪಕ್ವಮಾಡು; ಭವ: ಜೀವಿತ ಕಾಲ; ಭಯ: ಅಂಜಿಕೆ; ಲಲನೆ: ಹೆಂಗಸರು; ನಯನ: ಕಣ್ಣು; ದೇವ: ಭಗವಂತ; ತೆಗೆ:ಎತ್ತಿಕೊಳ್ಳು; ಸನುಮತ: ಒಳ್ಳೆಯ ಮತ; ಪುಳಕ: ಮೈನವಿರೇಳುವಿಕೆ; ಮಹೀಪಾಲ: ರಾಜ;
ಪದವಿಂಗಡಣೆ:
ಕಲಿಮಲದಿ +ಹೊಲೆಗಲಸಿದ್+ಇಭಪುರಿ
ಯೊಳಗೆ +ನಿರ್ಮಳವಾಯ್ತು +ಕೃಷ್ಣನ
ಚೆಲುವ+ ದರುಶನದಿಂದ+ ಬೆಂದವು +ಭವದ+ ಭಯಬೀಜ
ಲಲನೆಯರು+ ತಮತಮ್ಮ+ ನಯನಂ
ಗಳಿಗೆ+ ದೇವನ+ ತೆಗೆದು+ ಸನುಮತ
ಪುಳಕರಾದರು +ಕೇಳು +ಜನಮೇಜಯ +ಮಹೀಪಾಲ
ಅಚ್ಚರಿ:
(೧) ‘ಬ’ ಕಾರದ ತ್ರಿವಳಿ ಪದ – ಬೆಂದವು ಭವದ ಭಯಬೀಜ