ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನ ಸಭೆಯೊಳಗೆ (ಉದ್ಯೋಗ ಪರ್ವ, ೮ ಸಂಧಿ, ೪೦ ಪದ್ಯ)
ತಾತ್ಪರ್ಯ:
ಕರಣಿಕರು ತಾವು ಲೆಕ್ಕವನ್ನು ಬರೆದ ಬಳಿಕ ಅದು ವಿಧಿಯ (ಆಜ್ಞೆಯ) ಬರಹ ಆದುದರಿಂದ ಅದು ನಿಜವಾದ ಕಾರ್ಯಾರ್ಥವನ್ನು ತೋರುತ್ತದೆ, ಆದರೆ ಅದರಿಂದ ಲಾಭವು ದೊರಕಿದೊಡೆ ಅದು ಒಡೆಯನ ಅರ್ಥ ವೆಂದು ಭಾವಿಸಿ ನೀರಿನಲ್ಲಿ ಬರೆದಂತೆ ಅದು ಸಹ ಅಳಿಸಲಾಗುತ್ತದೆ, ತೆರಿಗೆಯನ್ನು ವಂಚಿಸುವರಲ್ಲಿ ನಿಸ್ಸೀಮರಾದವರು ಲಂಚನವನ್ನು ಕರಣಿಕರಿಗೆ ನೀಡುತ್ತಿದ್ದರು. ಲಂಚದಿಂದ ಜೀವನ ಮಾಡುವ ಜಾಣರಾದ ಕರಣಿಕರು ಸಭೆಯಲ್ಲಿ ನೆರೆದಿದ್ದರು.
ಅರ್ಥ:
ಬರೆ: ಅಕ್ಷರದಲ್ಲಿರಿಸು, ಲೇಖಿಸು; ಬಳಿಕ: ನಂತರ; ವಿಧಿ: ಆಜ್ಞೆ, ಆದೇಶ; ಸೀಮೆ: ಎಲ್ಲೆ, ಗಡಿ, ಮೇರೆ; ಬರಹ: ಬರವಣಿಗೆ; ನಿಜ: ಸತ್ಯ, ನೈಜ; ಕಾರ್ಯ: ಕೆಲಸ; ಪತಿ: ಒಡೆಯ; ಅರ್ಥ: ಅಭಿಪ್ರಾಯ; ಲಾಭ: ಪ್ರಯೋಜನ; ದೊರಕು: ಪಡೆ; ಕರ: ತೆರಿಗೆ; ಕರಗುಪಿತ ಲೋಲುಪರು: ತೆರಿಗೆಯನ್ನು ಬಚ್ಚಿಡುವುದರಲ್ಲಿ ಆಸಕ್ತಿಯುಳ್ಳವರು; ಲಂಚ: ಕಾರ್ಯಸಾಧನೆಗಾಗಿ ಅಕ್ರಮವಾಗಿ ಪಡೆಯುವ ಅಥವ ಕೊಡುವ ಹಣ; ಪರಮ: ಶ್ರೇಷ್ಠ; ಜೀವನ: ಬದುಕು; ಜಾಣ: ಬುದ್ಧಿವಂತ; ಸಿರಿ: ಐಶ್ವರ್ಯ; ಕರಣ: ಕೆಲಸ, ಸಾಮಗ್ರಿ; ಒಪ್ಪು: ಒಪ್ಪಿಗೆ, ಸಮ್ಮತಿ; ಭೂಪಾಲಕ: ರಾಜ; ಸಭೆ: ದರ್ಬಾರು; ಸಿರಿಕರಣ: ಶ್ರೇಷ್ಠವಾದ ಕರಣಿಕರು, ಲೆಕ್ಕಬರೆಯುವವರು;
ಪದವಿಂಗಡಣೆ:
ಬರೆದ +ಬಳಿಕದು +ವಿಧಿಯ +ಸೀಮೆಯ
ಬರಹ+ ನಿಜಕಾರ್ಯಾ+ಅರ್ಥ +ಲಾಭವು
ದೊರಕಿದೊಡೆ +ಪತಿಯರ್ಥ+ ನೀರಲಿ+ ಬರೆದ+ ಲಿಪಿಯಂತೆ
ಕರಗುಪಿತ+ ಲೋಲುಪರು+ ಲಂಚದ
ಪರಮಜೀವನ +ಜಾಣರಾ+ ಸಿರಿ
ಕರಣದವರ್+ಒಪ್ಪಿದರು +ಭೂಪಾಲಕನ+ ಸಭೆಯೊಳಗೆ
ಅಚ್ಚರಿ:
(೧) ಉಪಮಾನದ ಬಳಕೆ – ನೀರಲ್ಲಿ ಬರೆದ ಲಿಪಿಯಂತೆ
(೨) ಜೋಡಿ ಪದಗಳ ಬಳಕೆ – ಬರೆದ ಬಳಿಕದು, ಲೋಲುಪರು ಲಂಚದ