ಪದ್ಯ ೨೯: ದುರ್ಯೋಧನನು ಸಭೆಯನ್ನು ಹೇಗೆ ರಚಿಸಿದನು?

ಕರೆಸಿದನು ಮಣಿಮಕುಟ ಕಿರಣದ
ಗರುವರನು ಗಾಢಪ್ರತಾಪರ
ಬರಿಸಿದನು ತೂಕದ ಮಹಾ ಮಂಡಳಿಕ ಮನ್ನೆಯರ
ಧುರವಿಜಯ ಸಿದ್ಧರನು ಚಾಮೀ
ಕರದ ಗದ್ದುಗೆಯಖಿಳ ಸಾಮಂ
ತರನು ಪೃಥ್ವೀಪಾಲರನು ನೆರಹಿದನು ಭೂಪಾಲ (ಉದ್ಯೋಗ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಭೆಗೆ ಮಣಿಮಕುಟ ಕಿರೀಟವನ್ನು ಅಲಂಕರಿಸಿದ ಹಿರಿಯರನ್ನು, ಹೆಚ್ಚು ಪರಾಕ್ರಮಶಾಲಿಗಳನ್ನು, ಗೌರವಕ್ಕೆ ಪಾತ್ರರಾದ ಮಂಡಳೀಕರನ್ನು, ಯುದ್ಧದಲ್ಲಿ ಜಯಗಳಿಸುವ ಸಾಮರ್ಥ್ಯವುಳ್ಳವರನ್ನು, ಬಂಗಾರದ ಸಿಂಹಾಸನವನ್ನು ಅಲಂಕರಿಸುವ ದೇಶದ ಎಲ್ಲಾ ಶ್ರೇಷ್ಠ ರಾಜರನ್ನು ಸಂಧಿಯ ಸಭೆಗೆ ಒಟ್ಟುಗೂಡಿಸಿದನು.

ಅರ್ಥ:
ಕರೆಸು: ಬರೆಮಾಡು; ಮಣಿ: ರತ್ನ; ಮಕುಟ: ಕಿರೀಟ; ಕಿರಣ: ಕಾಂತಿ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ, ಅತಿಶಯ; ಪ್ರತಾಪ: ಪರಾಕ್ರಮ; ಬರಿಸು: ತುಂಬಿಸು; ತೂಕ: ಭಾರ, ಗುರುತ್ವ; ಮಹಾ: ಶ್ರೇಷ್ಠ; ಮಂಡಳಿಕ: ಸಾಮಂತ; ಮನ್ನೆಯ: ಮೆಚ್ಚಿನ, ಗೌರವಕ್ಕೆ ಪಾತ್ರನಾದ; ಧುರ: ಸಿರಿ, ಸಂಪತ್ತು; ಧುರವಿಜಯ: ಯುದ್ಧದಲ್ಲಿ ವಿಜಯ ಸಾಧಿಸುವವ; ಸಿದ್ಧ: ಸಾಧಿಸಿದವನು; ಚಾಮೀಕರ:ಬಂಗಾರ, ಚಿನ್ನ; ಗದ್ದುಗೆ: ಸಿಂಹಾಸನ; ಅಖಿಳ: ಎಲ್ಲಾ; ಸಾಮಂತ:ಒಬ್ಬ ರಾಜನಿಗೆ ಅಧೀನದಲ್ಲಿದ್ದು ಕಪ್ಪಕಾಣಿಕೆಗಳನ್ನು ಒಪ್ಪಿಸುವ ಆಶ್ರಿತರಾಜ, ಮಾಂಡ ಲಿಕ; ಪೃಥ್ವಿ: ಭೂಮಿ; ಪೃಥ್ವೀಪಾಲ: ರಾಜ; ನೆರಹು: ಸೇರಿಸು, ಒಟ್ಟುಗೂಡಿಸು; ಭೂಪಾಲ: ರಾಜ;

ಪದವಿಂಗಡಣೆ:
ಕರೆಸಿದನು+ ಮಣಿಮಕುಟ +ಕಿರಣದ
ಗರುವರನು+ ಗಾಢ+ಪ್ರತಾಪರ
ಬರಿಸಿದನು +ತೂಕದ +ಮಹಾ +ಮಂಡಳಿಕ+ ಮನ್ನೆಯರ
ಧುರವಿಜಯ +ಸಿದ್ಧರನು +ಚಾಮೀ
ಕರದ +ಗದ್ದುಗೆಯ+ಅಖಿಳ +ಸಾಮಂ
ತರನು+ ಪೃಥ್ವೀಪಾಲರನು +ನೆರಹಿದನು +ಭೂಪಾಲ

ಅಚ್ಚರಿ:
(೧) ಗುಣವಿಶೇಷಣಗಳ ಬಳಕೆ – ಮಣೀಮಕುಟ ಕಿರಣದ, ಗಾಢ ಪ್ರತಾಪ, ಮಹಾ ಮಂಡಳಿಕ, ಚಾಮೀಕರದ ಗದ್ದುಗೆ
(೨) ‘ಮ’ ಕಾರದ ತ್ರಿವಳಿ ಪದ – ಮಹಾ ಮಂಡಳಿಕ ಮನ್ನೆಯರು
(೩) ಪೃಥ್ವೀಪಾಲ, ಭೂಪಾಲ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ