ಓಲಗದೊಳಿರ್ದಖಿಳ ಮೂರ್ಖರ
ಮೌಳಿಯನು ಕಂಡವಧರಿಸು ಸಿರಿ
ಲೋಲ ಬಿಜಯಂಗೈಯಲವಸರವುಂಟೆ ಹೇಳೆನಲು
ನಾಳೆ ಕಾಣಿಸಿ ಕೊಂಬೆವಿನ್ನೇ
ನಾಳಿಕಾರನ ಬರವು ಹಗೆವರ
ಪಾಲಿಸುವ ಭರ ಸಂಧಿಕಾರ್ಯಕೆ ಬಾರದಿರನೆಂದ (ಉದ್ಯೋಗ ಪರ್ವ, ೮ ಸಂಧಿ, ೨೬ ಪದ್ಯ)
ತಾತ್ಪರ್ಯ:
ವಿದುರನು ದುರ್ಯೋಧನನ ಅರಮನೆಗೆ ಹೋದನು. ಮೂರ್ಖರಗುಂಪಿನ ಶಿಖರಪ್ರಾಯನಾಗಿದ್ದ ದುರ್ಯೋಧನನ್ನು ಕಂಡು ವಿದುರನು ಕೃಷ್ಣನು ಬಂದಿರುವನು ಎಂದು ಹೇಳಿದನು. ಅದಕ್ಕೇನು ಅವಸರ, ನಾಳೆ ನಾವು ಅವನನ್ನು ನೋಡುವೆವು ನಮ್ಮ ವೈರಿಗಳಾದ ಪಾಂಡವರನ್ನು ಪಾಲಿಸುವ ಭರದಿಂದ ಸಂಧಿಕಾರ್ಯಕ್ಕೆ ಬಾರದೇ ಹೋಗುವವನೇ ಎಂದು ದುರ್ಯೋಧನನು ನುಡಿದನು.
ಅರ್ಥ:
ಓಲಗ: ದರ್ಬಾರು; ಅಖಿಳ: ಎಲ್ಲಾ; ಮೂರ್ಖ: ಅವಿವೇಕಿ; ಮೌಳಿ: ಶಿರ, ಕಿರೀಟ; ಕಂಡು: ನೋಡಿ; ಅವಧರಿಸು: ಮನಸ್ಸಿಟ್ಟು ಕೇಳು; ಸಿರಿ: ಲಕ್ಷ್ಮಿ; ಲೋಲ: ಪ್ರೀತಿಯುಳ್ಳವನು; ಬಿಜಯಂಗೈ: ದಯಮಾಡಿಸು; ಅವಸರ: ಬೇಗ, ಕಾರ್ಯ; ಹೇಳು: ತಿಳಿಸು; ಕಾಣಿಸು: ತೋರು; ಆಳಿ: ಸಮೂಹ, ಗುಂಪು; ಬರವು: ಆಗಮನ; ಹಗೆ: ವೈರತ್ವ; ಪಾಲಿಸು: ಕಾಪಾಡು; ಭರ: ಅಧಿಕ, ಹೊತ್ತುಕೊಳ್ಳುವುದು ; ಸಂಧಿ: ಸಂಧಾನ; ಕಾರ್ಯ: ಕೆಲಸ; ಬಾರದಿರು: ಬರಬೇಡ;
ಪದವಿಂಗಡಣೆ:
ಓಲಗದೊಳಿರ್ದ+ಅಖಿಳ+ ಮೂರ್ಖರ
ಮೌಳಿಯನು +ಕಂಡ್+ಅವಧರಿಸು +ಸಿರಿ
ಲೋಲ +ಬಿಜಯಂಗೈಯಲ್+ಅವಸರವುಂಟೆ+ ಹೇಳ್+ಎನಲು
ನಾಳೆ +ಕಾಣಿಸಿ +ಕೊಂಬೆವ್+ಇನ್ನೇನ್
ಆಳಿಕಾರನ +ಬರವು +ಹಗೆವರ
ಪಾಲಿಸುವ +ಭರ +ಸಂಧಿಕಾರ್ಯಕೆ +ಬಾರದಿರನೆಂದ
ಅಚ್ಚರಿ:
(೧) ದುರ್ಯೋಧನನನ್ನು ಅಖಿಳ ಮೂರ್ಖರಮೌಳಿ ಎಂದು ಕರೆದಿರುವುದು
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು