ದೇವಕಿಯ ವಸುದೇವನನು ಬಲ
ದೇವ ಸೌಭದ್ರಾದಿ ಯದು ಭೂ
ಪಾವಳಿಯ ಸುಕ್ಷೇಮ ಕುಶಲವ ಕುಂತಿ ಬೆಸಗೊಳಲು
ದೇವ ನಗೆಮೊಗದಿಂದ ವರ ವಸು
ದೇವ ದೇವಕಿಯಾದಿ ಯಾದವ
ರಾ ವಿಳಾಸ ಮಹೀಶರಿರವನು ಕುಂತಿಗರುಹಿದನು (ಉದ್ಯೋಗ ಪರ್ವ, ೮ ಸಂಧಿ, ೧೯ ಪದ್ಯ)
ತಾತ್ಪರ್ಯ:
ಕುಂತಿಯು ಕೃಷ್ಣನನ್ನು ನೋಡಿ, ದೇವಕಿ, ವಸುದೇವ, ಬಲಭದ್ರ, ಸೌಭದ್ರ ಮತ್ತು ಯದುಕುಲದ ಎಲ್ಲರ ಕುಶಲ ಕ್ಷೇಮ ವಿಚಾರವನ್ನು ಕೇಳಿದಳು. ಕೃಷ್ಣನು ಸಂತೋಷದಿಂದ ದೇವಕಿ ವಸುದೇವಾದಿಯರ ಕ್ಷೇಮದ ವಿಚಾರವನ್ನು ತಿಳಿಸಿದನು.
ಅರ್ಥ:
ಭೂಪ: ರಾಜ; ಆವಳಿ: ಗುಂಪು; ಕ್ಷೇಮ: ನೆಮ್ಮದಿ; ಕುಶಲ: ಕ್ಷೇಮ; ಬೆಸ: ಕೇಳುವುದು; ನಗೆ: ಸಂತೋಷ; ಮೊಗ: ಮುಖ; ವರ: ಶ್ರೇಷ್ಠ; ವಿಳಾಸ: ಇರುವ ಸ್ಥಳ; ಮಹೀಶ: ರಾಜ;ಅರುಹು: ತಿಳಿಸು; ಆದಿ: ಮುಂತಾದ;
ಪದವಿಂಗಡಣೆ:
ದೇವಕಿಯ +ವಸುದೇವನನು +ಬಲ
ದೇವ+ ಸೌಭದ್ರಾದಿ +ಯದು +ಭೂ
ಪಾವಳಿಯ +ಸುಕ್ಷೇಮ +ಕುಶಲವ +ಕುಂತಿ +ಬೆಸಗೊಳಲು
ದೇವ +ನಗೆಮೊಗದಿಂದ +ವರ +ವಸು
ದೇವ +ದೇವಕಿಯಾದಿ +ಯಾದವ
ರಾ +ವಿಳಾಸ+ ಮಹೀಶರಿರವನು +ಕುಂತಿಗ್+ಅರುಹಿದನು
ಅಚ್ಚರಿ:
(೧) ದೇವಕಿ, ಬಲದೇವ, ವಸುದೇವ – ಪದಗಳ ಬಳಕೆ