ತೊಲಗಿದಸು ಬಂದಂತೆ ತರಣಿಯ
ಹೊಳಹು ಸೋಂಕಿದ ಜಕ್ಕವಕ್ಕಿಯ
ಬಳಗದಂತಿರೆ ಕೃಷ್ಣರಾಯನ ಬರವ ತಾ ಕೇಳ್ದು
ಪುಳಕ ಪಸರಿಸಿ ಪರಮಹರುಷವ
ತಳೆದು ದೇವನ ಕಾಣಿಕೆಯ ಕಂ
ಗಳಿಗೆ ಕಡುಲೋಲುಪತೆ ಮಿಗೆ ಹರಿತಂದಳಾ ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೬ ಪದ್ಯ)
ತಾತ್ಪರ್ಯ:
ಹೋದ ಪ್ರಾಣವು ಮತ್ತೆ ಬಂದಂತೆ, ಸೂರ್ಯನ ರಶ್ಮಿಯ ಕಾಂತಿಯನ್ನು ಸ್ಪರ್ಶಿಸಿದ ಚಕ್ರವಾಕ ಪಕ್ಷಿಗಳ ಬಳಗದಂತೆ, ಕೃಷ್ಣನ ಆಗಮನವನ್ನು ಕೇಳಿದ ಕುಂತಿಯು ರೋಮಾಂಚನಗೊಂಡು ಅತ್ಯಂತ ಹರುಷದಿಂದ ಕೃಷ್ಣನನ್ನು ನೋಡುವ ಭಾಗ್ಯವನ್ನು ತನ್ನ ಕಣ್ಣುಗಳಿಗೆ ಕಾಣಿಕೆಯಾಗಿ ನೀಡಲು ಅತ್ಯಂತ ಆಸೆಯಿಂದ ಓಡೋಡಿ ಬಂದಳು.
ಅರ್ಥ:
ತೊಲಗು: ಹೋಗು; ಅಸು: ಪ್ರಾಣ; ಬಂದು: ಆಗಮಿಸು; ತರಣಿ: ಸೂರ್ಯ; ಹೊಳಹು: ಕಾಂತಿ; ಸೋಂಕು: ಸ್ಪರ್ಶ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಬಳಗ: ಗುಂಪು; ಬರವ: ಆಗಮನ; ಕೇಳು: ಆಲಿಸು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪಸರಿಸು: ಹರಡು; ಪರಮ: ಶ್ರೇಷ್ಠ; ಹರುಷ: ಸಂತೋಷ; ತಳೆದು: ತಾಳಿ; ದೇವ: ಭಗವಂತ; ಕಾಣಿಕೆ: ಉಡುಗೊರೆ; ಕಂಗಳು: ಕಣ್ಣು; ಕಡು: ಹೆಚ್ಚು; ಲೋಲುಪ: ಅತಿಯಾಸೆಯುಳ್ಳವನು; ಮಿಗೆ: ಹೆಚ್ಚಾಗಿ; ಹರಿ: ಪ್ರವಾಹ;
ಪದವಿಂಗಡಣೆ:
ತೊಲಗಿದ್+ಅಸು +ಬಂದಂತೆ +ತರಣಿಯ
ಹೊಳಹು +ಸೋಂಕಿದ +ಜಕ್ಕವಕ್ಕಿಯ
ಬಳಗದಂತಿರೆ+ ಕೃಷ್ಣರಾಯನ +ಬರವ +ತಾ +ಕೇಳ್ದು
ಪುಳಕ+ ಪಸರಿಸಿ+ ಪರಮ+ಹರುಷವ
ತಳೆದು +ದೇವನ +ಕಾಣಿಕೆಯ+ ಕಂ
ಗಳಿಗೆ+ ಕಡುಲೋಲುಪತೆ+ ಮಿಗೆ +ಹರಿತಂದಳಾ +ಕುಂತಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ತೊಲಗಿದಸು ಬಂದಂತೆ; ತರಣಿಯ ಹೊಳಹು ಸೋಂಕಿದ ಜಕ್ಕವಕ್ಕಿಯ ಬಳಗದಂತಿರೆ
(೨) ‘ಪ’ ಕಾರದ ತ್ರಿವಳಿ ಪದ – ಪುಳಕ ಪಸರಿಸಿ ಪರಮಹರುಷವ
(೩) ಬೇಗ ಬಂದಳು ಎಂದು ಹೇಳಲು – ‘ಹರಿತಂದಳಾ’ ಪದ ಪ್ರಯೋಗ