ಪದ್ಯ ೧೦೬: ದಾರಿದ್ರ್ಯವು ಹೇಗೆ ನಮ್ಮನ್ನು ಹಿಂಬಾಲಿಸುತ್ತದೆ?

ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನ ಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನಮಾಡಿಯು ಬೆನ್ನ ಬಿಡದವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಹಿಂದಿನ ಜನ್ಮದಲ್ಲಿ ದಾನಮಾಡದಿರುವವರು ದರಿದ್ರರಾಗಿ ಜನ್ಮತಾಳುತ್ತಾರೆ. ದರಿದ್ರರಾಗಿ ಹುಟ್ಟಿದುದರಿಂದ ಅವರಿಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಅವಕಾಶ ದೊರೆಯುವುದಿಲ್ಲ, ಪುನಃ ನರಕಕ್ಕೆ ಹೋಗುತ್ತಾರೆ ನರಕದಿಂದ ಮತ್ತೆ ಪಾಪಯೋನಿಯಲ್ಲಿ ಜನಿಸಿ ಮತ್ತೆ ದರಿದ್ರರಾಗುತ್ತಾರೆ. ಹೀಗೆ ದಾರಿದ್ರ್ಯವು ಏನು ಮಾಡಿದರೂ ಬೆನ್ನು ಬಿಡುವುದಿಲ್ಲ ಎಂದು ಸನತ್ಸುಜಾತರು ದಾನದ ಮಹಿಮೆಯನ್ನು ವಿವರಿಸಿದರು.

ಅರ್ಥ:
ದಾನ: ನೀಡು, ಚತುರೋಪಾಯದಲ್ಲೊಂದು; ವಿರಹಿ: ವಿಯೋಗಿ; ಜನಿಸು: ಹುಟ್ಟು; ಮಾನವ: ಮನುಷ್ಯ; ದಾರಿದ್ರ: ಬಡವ, ಧನಹೀನ; ಹೀನ: ಕೆಟ್ಟದು; ಸುಕೃತಿ: ಒಳ್ಳೆಯ ಕೆಲಸ; ಘೋರ: ಉಗ್ರ, ಭಯಂಕರ; ನರಕ: ಅಧೋಲೋಕ; ಮರಳು: ಹಿಂತಿರುಗು; ಪಾತಕ: ಪಾಪ; ಯೋನಿ: ಗರ್ಭಕೋಶ; ದರಿದ್ರ: ದೀನ, ಬಡವ; ಬೆನ್ನು: ಹಿಂಬಾಗ; ಬಿಡು: ತೊರೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದಾನ+ವಿರಹಿತರಾಗಿ+ ಜನಿಸಿದ
ಮಾನವರು+ ದಾರಿದ್ರರ್+ಅದರಿಂ
ಹೀನ +ಸುಕೃತಿಗಳಾಗಿ+ಅದರಿಂ +ಘೋರತರ +ನರಕ
ಆ +ನರಕದಿಂ +ಮರಳಿ +ಪಾತಕ
ಯೋನಿ +ಮರಳಿ+ ದರಿದ್ರವದು+ ತಾನ್
ಏನ+ಮಾಡಿಯು +ಬೆನ್ನ +ಬಿಡದ್+ಅವನೀಶ +ಕೇಳೆಂದ

ಅಚ್ಚರಿ:
(೧) ದಾನ, ಹೀನ – ಪ್ರಾಸ ಪದ
(೨) ಅದರಿಂ, ಮರಳಿ – ೨ ಬಾರಿ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ