ಸರಸಿಜಾಕ್ಷನ ದಿವ್ಯನಾಮ
ಸ್ಮರಣವನು ಶ್ರುತಿಮೂಲ ವಾಕ್ಯೋ
ತ್ಕರುಷವನು ಭೂತಕ್ಕೆ ಹಿತವಹ ಮಾತನತಿಗಳೆದು
ಪರರ ವಾನವ ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೦ ಪದ್ಯ)
ತಾತ್ಪರ್ಯ:
ವೇದಗಳ ಸಾರವಾದ ಮಾತುಗಳು; ಭಗವನ್ನಾಮ ಸ್ಮರಣೆ, ಸಮಸ್ತ ಪ್ರಾಣಿಗಳಿಗೂ ಹಿತವನ್ನು ಬಯಸುವ ಮಾತು, ಇವುಗಳನ್ನು ಬಿಟ್ಟು ಬೇರೊಂದು ಮಾತನ್ನು ಸರ್ವಥಾ ಆಡಬಾರದು ಎನ್ನುವುದು ಸಜ್ಜನರ ಅಭಿಪ್ರಾಯವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.
ಅರ್ಥ:
ಸರಸಿಜಾಕ್ಷ: ವಿಷ್ಣು, ಭಗವಂತ; ದಿವ್ಯ: ಶ್ರೇಷ್ಠ; ನಾಮ: ಹೆಸರು; ಸ್ಮರಣೆ: ಜ್ಞಾಪಿಸಿಕೊಳ್ಳು; ಶ್ರುತಿ: ವೇದ; ಮೂಲ: ಬೇರು, ಬುಡ, ಕಾರಣ; ವಾಕ್ಯ: ನುಡಿ; ಉತ್ಕರ್ಷ: ಹೆಚ್ಚಳ, ಮೇಲ್ಮೆ; ಭೂತಕ್ಕೆ: ಭೂಮಿಗೆ; ಹಿತ: ಒಳ್ಳೆಯದು, ಪ್ರಿಯಕರವಾದ; ಮಾತು: ನುಡಿ; ಪರರ: ಬೇರೆಯವರ; ವಚನ: ಮಾತು; ತ್ರಿಕರಣ: ಕಾಯ, ವಾಕ್ಕು ಮತ್ತು ಮನಸ್ಸು ಎಂಬ ಮೂರು ಅಂಗಗಳು; ಉಚ್ಚರಿಸು: ಹೇಳು; ಸರ್ವಥಾ: ಯಾವಾಗಲು; ಸತ್ಪುರುಷ: ಒಳ್ಳೆಯ ಮನುಷ್ಯ; ಅಭಿಮತ: ಅಭಿಪ್ರಾಯ; ಭೂಪಾಲ: ರಾಜ; ಕೇಳು: ಆಲಿಸು; ಕಣಾ: ನೋಡಾ;
ಪದವಿಂಗಡಣೆ:
ಸರಸಿಜಾಕ್ಷನ+ ದಿವ್ಯನಾಮ
ಸ್ಮರಣವನು +ಶ್ರುತಿಮೂಲ +ವಾಕ್ಯ
ಉತ್ಕರುಷವನು+ ಭೂತಕ್ಕೆ +ಹಿತವಹ +ಮಾತನ್+ಅತಿಗಳೆದು
ಪರರ+ ವಚನವ+ ತ್ರಿಕರಣದೊಳ್
ಉಚ್ಚರಿಸಲಾಗದು+ ಸರ್ವಥಾ +ಸ
ತ್ಪುರುಷರ್+ಅಭಿಮತವಿದು +ಕಣಾ +ಭೂಪಾಲ +ಕೇಳೆಂದ
ಅಚ್ಚರಿ:
(೧) ಸರಸಿಜಾಕ್ಷ, ಸ್ಮರಣ, ಸರ್ವಥಾ, ಸತ್ಪುರುಷ – ‘ಸ’ ಕಾರದ ಪದಗಳು