ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೯೭ ಪದ್ಯ)
ತಾತ್ಪರ್ಯ:
ದುಷ್ಕರ್ಮ ಮಾಡಿದವರು ದುಃಖ ಬಂದಾಗ ಕಕ್ಕುಲಾತಿ ಪಡುತ್ತಾರೆ. ಆದರೆ ಅವರು ಸತ್ಕರ್ಮವೆಂಬುದನ್ನು ಬಗೆಯುವುದೇ ಇಲ್ಲ. ಆದರೆ ಪುಣ್ಯಫಲವಾದ ಸುಖ ಮಾತ್ರ ಬೇಕೆಂದು ಇಚ್ಛಿಸುತ್ತಾರೆ. ಸುಕೃತವನ್ನು ಬಿತ್ತದೆ ನೀರು ಹಾಕದೆ ಬೆಳಸದೆ ಸ್ವರ್ಗಭೋಗವು ಸಿಕ್ಕುವುದಾದರೂ ಹೇಗೆ ಎಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ದುಷ್ಕೃತ: ಕೆಟ್ಟ ಕೆಲಸ; ಫಲ: ಪರಿಣಾಮ; ಕಕ್ಕುಲತೆ: ಆಸಕ್ತಿ, ಪ್ರೀತಿ; ಚಿಂತೆ; ಸುಕೃತ: ಒಳ್ಳೆಯ ಕೆಲಸ; ಲೆಕ್ಕಿಸು: ಗಣನೆಗೆ ತೆಗೆದುಕೊ; ತತ್ಫಲ: ಆ ಪರಿಣಾಮ; ಬಯಸು: ಇಷ್ಟಪಡು; ಮಾನವರು: ಮನುಷ್ಯರು; ಇಕ್ಕದೆ: ಇರಿಸು, ಇಡು, ಹಾಕು; ಎರೆ: ಸುರಿ; ಬಿತ್ತು: ಬೀಜ ಹಾಕು, ಉಂಟುಮಾಡು; ಬೆಳೆ: ಬೆಳಸು, ಬೆಳವಣಿಗೆ; ಪುಕ್ಕಟೆ: ಉಚಿತ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಸಿಕ್ಕು: ಪಡೆ; ಅರಿ: ತಿಳಿ; ರಾಯ: ರಾಜ; ಚಿತ್ತೈಸು: ಗಮನಿಸು; ಮುನಿ: ಋಷಿ;
ಪದವಿಂಗಡಣೆ:
ದುಷ್ಕೃತವನ್+ಎಸಗುವರು +ಫಲದಲಿ
ಕಕ್ಕುಲಿಸುವರು +ಸುಕೃತ+ವೆಂಬುದ
ಲೆಕ್ಕಿಸರು +ತತ್ಫಲವನೇ +ಬಯಸುವರು +ಮಾನವರು
ಇಕ್ಕದ್+ಎರೆಯದೆ+ ಬಿತ್ತಿ +ಬೆಳೆಯದೆ
ಪುಕ್ಕಟೆಯ +ಸ್ವರ್ಗಾದಿ +ಭೋಗವು
ಸಿಕ್ಕಲರಿವುದೆ +ರಾಯ +ಚಿತ್ತೈಸೆಂದನಾ +ಮುನಿಪ
ಅಚ್ಚರಿ:
(೧) ಎಸಗುವರು, ಕಕ್ಕುಲಿಸುವರು, ಬಯಸುವರು, ಮಾನವರು – ಅಂತ್ಯ ಪ್ರಾಸ ಪದಗಳು
(೨) ಕಷ್ಟಪಡದೆ ಎಂದು ತಿಳಿಸಲು – ಇಕ್ಕದೆರೆಯದೆ ಬಿತ್ತಿ ಬೆಳೆಯದೆ ಪುಕ್ಕಟೆಯ…