ಪದ್ಯ ೯೦: ಯಾವ ಕಾರ್ಯಗಳು ಫಲವನ್ನು ಕೊಡುವುದಿಲ್ಲ?

ಕಾದುದಕದಾಸ್ನಾನವೆಂಬುದ
ವೈದಿಕಾಂಗದ ಮಂತ್ರಸಾಧನ
ವೇದಹೀನರಿಗಿತ್ತ ದಾನವು ಶ್ರಾದ್ಧಕಾಲದೊಳು
ಎಯ್ದದಿಹ ದಕ್ಷಿಣೆಗಳೆಂಬಿವು
ಬೂದಿಯೊಳು ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಯಿಸಿದ ನೀರಿನ ಸ್ನಾನ, ವೈದಿಕವಲ್ಲದ ಮಂತ್ರದ ಸಾಧನೆ, ವೇದಾಧ್ಯಯನವಿಲ್ಲದವರಿಗಿತ್ತ ದಾನ, ಶ್ರಾದ್ಧದಲ್ಲಿ ದಕ್ಷಿಣೆ ಕೊಡದಿರುವುದು, ಇವು ಬೂದಿಯಲ್ಲಿ ಹೋಮ ಮಾಡಿದ ಹಾಗೆ, ಯಾವ ಫಲವೂ ಸಿಗುವುದಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಕಾದು: ಬಿಸಿ, ಕುದಿ; ಉದಕ: ನೀರು; ಸ್ನಾನ: ಅಭ್ಯಂಜನ; ವೈದಿಕ: ವೇದಗಳನ್ನು ಬಲ್ಲವನು; ಅಂಗ: ಭಾಗ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಾಧನ: ಸಿದ್ಧಿಯನ್ನು ಪಡೆಯುವ ಯತ್ನ, ಸಾಧಿಸುವಿಕೆ; ವೇದ: ಶೃತಿ, ಜ್ಞಾನ; ಹೀನ: ತಿಳಿಯದ; ದಾನ: ಕೊಡುಗೆ; ಶ್ರಾದ್ಧ: ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ಕಾಲ: ಸಮಯ; ಐದೆ: ವಿಶೇಷವಾಗಿ; ದಕ್ಷಿಣೆ: ಸಂಭಾವನೆ; ಬೂದಿ: ಭಸ್ಮ, ವಿಭೂತಿ; ಬೇಳು: ಹೋಮವನ್ನು ಮಾಡು, ಹವಿಸ್ಸನ್ನು ಅರ್ಪಿಸು; ಹವಿಸ್ಸು: ಹವಿ, ಚರು; ಹಾದಿ: ದಾರಿ; ಫಲ: ಪ್ರಯೋಜನ, ಪರಿಣಾಮ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಾದ್+ಉದಕದಾ+ಸ್ನಾನ+ವೆಂಬುದ್+
ಅವೈದಿಕಾಂಗದ +ಮಂತ್ರಸಾಧನ
ವೇದಹೀನರಿಗಿತ್ತ+ ದಾನವು+ ಶ್ರಾದ್ಧ+ಕಾಲದೊಳು
ಎಯ್ದದಿಹ+ ದಕ್ಷಿಣೆಗಳೆಂಬ್+ಇವು
ಬೂದಿಯೊಳು +ಬೇಳಿದ+ ಹವಿಸ್ಸಿನ
ಹಾದಿಯಲ್ಲದೆ +ಫಲವನೀಯವು +ರಾಯ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೂದಿಯೊಳು ಬೇಳಿದ ಹವಿಸ್ಸಿನ ಹಾದಿ
(೨) ಸ್ನಾನ, ದಾನ – ಪ್ರಾಸ ಪದಗಳ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ