ಅತಿಥಿ ಪೂಜೆಯನುಳಿದ ಜೀವ
ನ್ಮೃತನ ಧರ್ಮಸ್ಥಿತಿಯನಪಹರಿ
ಸುತೆಬಹನದಲ್ಲದವನನಾ ನಿರ್ಯಾಣಕಾಲದೊಳು
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕ ನರಕದೊಳಗ
ದ್ದುತೆ ಬಹನು ಕುಲಕೋಟಿ ಸಹಿತವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೭ ಪದ್ಯ)
ತಾತ್ಪರ್ಯ:
ಅತಿಥಿಪೂಜೆಯನ್ನು ಮಾಡದಿರುವ ಜೀವನ್ಮೃತನ ಧರ್ಮವನ್ನು ಯಮನು ಅಪಹರಿಸುತ್ತಾ ಹೋಗುವುದಲ್ಲದೆ, ಅವನು ಮೃತನಾದ ಮೇಲೆ ಅವನ ಪರಲೋಕ ಗತಿಯನ್ನು ಕೆಡಿಸಿ ಮಹಾನರಕಗಳಲ್ಲಿ ಅವನ ಕುಲಕೋಟಿ ಸಹಿತ ಕೂಡಿ ಹಾಕುತ್ತಾನೆಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಅತಿಥಿ: ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ; ಪೂಜೆ: ಆತಿಥ್ಯ, ಅರ್ಚನೆ; ಉಳಿದ: ಮಿಕ್ಕ; ಜೀವನ್ಮೃತ: ಬದುಕಿದ್ದರೂ ಸತ್ತವನಂತೆ ನಿಶ್ಯಕ್ತನಾದವನು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸ್ಥಿತಿ: ಅವಸ್ಥೆ, ದೆಸೆ; ಅಪಹರಿಸು: ಕಿತ್ತುಕೊಳ್ಳು; ನಿರ್ಯಾಣ: ಹೊರಡುವುದು, ಹೊರ ಬೀಳುವುದು; ಕಾಲ: ಸಮಯ; ಗತಿ: ಗಮನ, ಸಂಚಾರ; ಗೆಡಿಸು: ತೊಂದರೆ ಒಡ್ಡು; ಕೊಂಡೊಯ್ದು: ತೆಗೆದುಕೊಂಡು ಹೋಗಿ; ವೈವಸ್ವತ: ಸೂರ್ಯಪುತ್ರ, ಶ್ರಾದ್ಧ ದೇವ; ನಾಯಕ: ಮುಂದಾಳು, ಮುಖಂಡ, ದೊರೆ; ನರಕ: ಅಧೋಲೋಕ; ಅದ್ದು: ಮುಳುಗಿಸು; ಕುಲಕೋಟಿ: ವಂವಾವಳಿ; ಸಹಿತ: ಜೊತೆ; ಅವನೀಶ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಅತಿಥಿ +ಪೂಜೆಯನ್+ಉಳಿದ +ಜೀವ
ನ್ಮೃತನ +ಧರ್ಮಸ್ಥಿತಿಯನ್+ಅಪಹರಿ
ಸುತೆ+ಬಹನದ್+ಅಲ್ಲದವನನಾ +ನಿರ್ಯಾಣ+ಕಾಲದೊಳು
ಗತಿಗೆಡಿಸಿ+ ಕೊಂಡೊಯ್ದು +ವೈವ
ಸ್ವತನು +ನಾಯಕ +ನರಕದೊಳಗ್
ಅದ್ದುತೆ +ಬಹನು +ಕುಲಕೋಟಿ +ಸಹಿತ್+ಅವನೀಶ +ಕೇಳೆಂದ
ಅಚ್ಚರಿ:
(೧) ಯಮನೆಂದು ಹೇಳಲು – ವೈವಸ್ವತ ನಾಯಕ
(೨) ಜೀವನ್ಮೃತ – ಪದದ ಬಳಕೆ