ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೮೩ ಪದ್ಯ)
ತಾತ್ಪರ್ಯ:
ಗುರು, ತಂದೆ, ತಾಯಿ, ಹಿರಿಯರು, ಭಗವಂತ, ಪಾಪದ ತೊಡಕುಗಳಲಿ, ಗೋವು, ತೀರ್ಥಕ್ಷೇತ್ರಗಳಲಿ, ಸಲಹುವ ಒಡೆಯ, ಮಂತ್ರದಿಂದ ಮಾಡುವ ದೇವತಾಸೇವೆ, ಬ್ರಾಹ್ಮಣರು ಇವರಲ್ಲೆಲ್ಲಾ ಭಯಭಕ್ತಿಯಿಂದ ನಡೆಯಬೇಕೆಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಗುರು: ಆಚಾರ್ಯ; ತಂದೆ: ಪಿತ; ತಾಯಿ: ಮಾತೆ; ಹಿರಿಯರು: ದೊಡ್ಡವರು, ಶ್ರೇಷ್ಠರು; ದೈವ: ಭಗವಂತ; ಪಾಪ: ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ಇರುಬು: ತೊಡಕು, ಇಕ್ಕಟ್ಟು; ಗೋವು: ಹಸು; ತೀರ್ಥ: ಪವಿತ್ರವಾದ ಜಲ, ಪುಣ್ಯಕ್ಷೇತ್ರ; ಹೊರೆ: ರಕ್ಷಣೆ, ಆಶ್ರಯ; ದಾತಾರ: ಕೊಡುವವನು, ದಾನಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಪರಮ: ಶ್ರೇಷ್ಠ; ಸೇವೆ: ಊಳಿಗ, ಚಾಕರಿ; ಧರಣಿ: ಭೂಮಿ; ಧರಣೀಸುರ: ಬ್ರಾಹ್ಮಣ; ಅಂಜಿಕೆ: ಭಯ; ಹಿರಿದು: ಅತಿಶಯವಾದುದು, ಹೆಚ್ಚಾದುದು;
ಪದವಿಂಗಡಣೆ:
ಗುರುವಿನಲಿ +ತಂದೆಯಲಿ +ತಾಯಲಿ
ಹಿರಿಯರಲಿ +ದೈವದಲಿ +ಪಾಪದ
ಇರುಬಿನಲಿ+ ಗೋವಿನಲಿ+ ತೀರ್ಥದಲಿ +ತನ್ನುವನು
ಹೊರೆವ +ದಾತಾರನಲಿ +ಮಂತ್ರದ
ಪರಮ+ ಸೇವೆಗಳಲ್ಲಿ+ ಧರಣೀ
ಸುರರೊಳ್+ಅಂಜಿಕೆ +ಹಿರಿದಿರಲು +ಬೇಕೆಂದನಾ +ಮುನಿಪ
ಅಚ್ಚರಿ:
(೧) ೧೧ ರೀತಿಯ ಜನರಬಳಿ ಭಯಭಕ್ತಿಯಿಂದ ನಡೆಯಬೇಕೆಂದು ತಿಳಿಸುವ ಪದ್ಯ