ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೬೩ ಪದ್ಯ)
ತಾತ್ಪರ್ಯ:
ಹಾಲಿನ ಸಮುದ್ರದಲ್ಲಿ ವಿಷ್ಣುವು ಯೋಗನಿದ್ರೆಯಲ್ಲಿ ಮುಳುಗಿರಲು ಭೃಗು ಮಹರ್ಷಿಯು ಅವನನ್ನು ನೋಡಲು ಬಂದು, ಬಂದ ಬ್ರಾಹ್ಮಣನನ್ನು ಆಹ್ವಾನಿಸಲಿಲ್ಲವೆಂದು ಕೋಪಗೊಂಡು ವಿಷ್ಣುವಿನ ವಕ್ಷಸ್ಥಳವನ್ನು ಒದೆಯುತ್ತಾನೆ. ವಿಷ್ಣುವು ಭೃಗು ಮಹರ್ಷಿಯ ಪಾದಕ್ಕೆ ನೋವಾಯಿತೇನೋ ಎಂದು ಅದನ್ನು ತನ್ನ ಎದೆಯ ಮೇಲಿಟ್ಟು ಒತ್ತಿ ಆ ಪಾದಗಳ ಮಹಿಮೆಯನ್ನು ಮೆರೆದನು. ಬ್ರಾಹ್ಮಣೋತ್ತಮರ ಪಾದೋದಕಕ್ಕಿಂತ ಹೆಚ್ಚಿನ ತೀರ್ಥವಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.
ಅರ್ಥ:
ಶರಧಿ: ಸಮುದ್ರ; ಹರಿ: ವಿಷ್ಣು; ಯೋಗ: ಹೊಂದಿಸುವಿಕೆ, ಮನಸ್ಸು ಹಾಗೂ ಇಂದ್ರಿಯಗಳನ್ನು ನಿಗ್ರಹಿಸಿ ಏಕಚಿತ್ತದಿಂದ ಧ್ಯಾನ ಮಾಡುವಿಕೆ; ನಿದ್ರೆ: ಶಯನ; ಲಕ್ಷ್ಮೀ; ಶ್ರೀದೇವಿ; ಲಕ್ಷ್ಮೀಧರ: ವಿಷ್ಣು; ವಕ್ಷ: ಹೃದಯ; ಸ್ಥಳ: ಜಾಗ; ಒದೆ: ದೂಕು; ಮುನಿ: ಋಷಿ; ಚರಣ: ಪಾದ; ಸಿರಿ: ಲಕ್ಷ್ಮೀ; ಉದರ: ಮಧ್ಯಭಾಗ, ಹೊಟ್ಟೆ; ಒತ್ತು: ಸ್ಪರ್ಶ; ಧರಣಿ: ಭೂಮಿ; ಸುರ: ದೇವ; ಧರಣೀಸುರ: ಬ್ರಾಹ್ಮಣ; ಮೆರೆ:ಪ್ರಸಿದ್ಧವಾಗು, ಪ್ರಖ್ಯಾತವಾಗು; ತೀರ್ಥ: ಪವಿತ್ರವಾದ ಜಲ; ಪಾದ: ಚರಣ; ಧರೆ: ಭೂಮಿ; ಬುಧ: ವಿದ್ವಾಂಸ, ಬ್ರಾಹ್ಮಣ; ಅಧಿಕ: ಹೆಚ್ಚು;
ಪದವಿಂಗಡಣೆ:
ಶರಧಿಯೊಳು+ ಹರಿ +ಯೋಗ+ನಿದ್ರೆಯೊಳ್
ಇರಲು +ಭೃಗುವೈತಂದು +ಲಕ್ಷ್ಮೀ
ಧರನ+ ವಕ್ಷಸ್ಥಳವನ್+ಒದೆಯಲು +ಮುನಿಯ +ಚರಣವನು
ಸಿರಿ+ಯುದರದೊಳಗ್+ಒತ್ತಿ +ಧರಣೀ
ಸುರರ+ ಮೆರೆದನು+ ತೀರ್ಥ+ಪಾದವ
ಧರೆಯೊಳಗೆ+ ಬುಧರಿಂದ್+ಅಧಿಕವಹ+ ತೀರ್ಥವಿಲ್ಲೆಂದ
ಅಚ್ಚರಿ:
(೧) ಹರಿ, ಲಕ್ಷ್ಮೀಧರ; ಲಕ್ಷ್ಮೀ, ಸಿರಿ – ಸಮಾನಾರ್ಥಕ ಪದ
(೨) ಧರಣೀಸುರ, ಬುಧ – ಸಾಮ್ಯಪದಗಳ ಬಳಕೆ