ನಷ್ಟವಿದು ಸಂಸಾರದೊಳಗು
ತ್ಕೃಷ್ಟವಿದು ಮುನ್ನಾದಿಮಾರ್ಗದ
ಸೃಷ್ಟಿಯಿದು ಲೋಕಾಂತರದ ಸುಖ ದುಃಖದೇಳಿಗೆಯ
ಹುಟ್ಟು ಮೆಟ್ಟಿನ ಕಾಲ ಕರ್ಮದ
ಕಟ್ಟಲೆಯಿಂದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೨೨ ಪದ್ಯ)
ತಾತ್ಪರ್ಯ:
ಸಂಸಾರದಲ್ಲಿ ಇದು ನಷ್ಟಕರ, ಇದು ಉತ್ಕೃಷ್ಟ, ಇದು ಆದಿಯಿಂದ ಬಂದ ಆಚಾರ, ಇದರಿಂದ ಈ ಲೋಕದ ಹಾಗು ಬೇರೆಲೋಕದ ಸುಖ ದುಃಖಗಳುಂಟಾಗುತ್ತವೆ, ಈ ಜನ್ಮಕ್ಕೆ ಕಾರಣವಾದ ಹಿಂದೆ ಮಾಡಿದ ಕರ್ಮದ ಫಲವಿದು ಎಂದು ಜಾಗರೂಕನಾಗಿ ನಡೆಯುವವನಿಗೆ ವಿರೋಧ ಬರಲು ಹೇಗೆ ಕಾರಣ ಎಂದು ಮುನಿ ಸನತ್ಸುಜಾತರು ಕೇಳಿದರು.
ಅರ್ಥ:
ನಷ್ಟ: ಹಾನಿ, ಕೆಡುಕು; ಸಂಸಾರ: ಲೌಕಿಕ ಜೀವನ, ಬದುಕು; ಉತ್ಕೃಷ್ಟ: ಶ್ರೇಷ್ಠ; ಮುನ್ನ: ಮುಂತಾದ; ಆದಿ: ಮೊದಲಾದ; ಮಾರ್ಗ: ದಾರಿ; ಸೃಷ್ಟಿ: ಹುಟ್ಟು; ಲೋಕ: ಜಗತ್ತು; ಲೋಕಾಂತರ: ಬೇರೊಂದು ಲೋಕ, ಪರಲೋಕ; ಸುಖ: ಸಂತೋಷ; ದುಃಖ: ದುಗುಡು; ಏಳಿಗೆ: ಹೆಚ್ಚಳ; ಹುಟ್ಟು: ಜನನ; ಮೆಟ್ಟು: ತುಳಿತ; ಕಾಲ: ಸಮಯ; ಕರ್ಮ: ಕಾರ್ಯ, ಕೆಲಸ; ಕಟ್ಟಳೆ: ಅನೂಚಾನವಾಗಿ ಅನುಸರಿಸಿಕೊಂಡು ಬಂದ ನಿಯಮ; ಅರಿ: ತಿಳಿ; ನಡೆವ: ಹೆಜ್ಜೆ ಹಾಕುವ; ಇಟ್ಟಣಿಸು: ದಟ್ಟವಾಗು; ಹೇಳು: ತಿಳಿಸು; ಮುನಿ: ಋಷಿ;
ಪದವಿಂಗಡಣೆ:
ನಷ್ಟವಿದು +ಸಂಸಾರದೊಳಗ್
ಉತ್ಕೃಷ್ಟವಿದು +ಮುನ್ನಾದಿ+ಮಾರ್ಗದ
ಸೃಷ್ಟಿಯಿದು +ಲೋಕಾಂತರದ+ ಸುಖ ದುಃಖದ್+ಏಳಿಗೆಯ
ಹುಟ್ಟು +ಮೆಟ್ಟಿನ +ಕಾಲ +ಕರ್ಮದ
ಕಟ್ಟಲೆಯಿಂದ್+ಎಂದ್+ಅರಿದು +ನಡೆವಂಗ್
ಇಟ್ಟಣಿಸುವುದ್+ಆದಾವುದೈ+ ಹೇಳೆಂದನಾ +ಮುನಿಪ
ಅಚ್ಚರಿ:
(೧) ನಷ್ಟ, ಉತ್ಕೃಷ್ಟ – ಪ್ರಾಸ ಪದ
(೨) ಸುಖ ದುಃಖ – ವಿರುದ್ಧ ಪದಗಳು
(೩) ಕ ಕಾರದ ತ್ರಿವಳಿ ಪದ – ಕಾಲ ಕರ್ಮದ ಕಟ್ಟಲೆ