ಪದ್ಯ ೧೬: ಜಗತ್ತು ಎಂದು ಹಾಳಾಗುವುದು?

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯೊಳು ಮನ
ಸಂದು ಸಮ್ಯಜ್ಞಾನದುದಯದ ನೆಲೆಯು ಕಾಣಿಸದೆ
ದಂದುಗಂಬಡುತಿಹುದು ತತ್ತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದೊಳು ಬಾರದೇ ಕಿಡುತಿಹುದು ಜಗವೆಂದ (ಉದ್ಯೋಗ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಂದೇ ಇರುವ ಬ್ರಹ್ಮವಸ್ತುವವನ್ನು ಎರಡು ಮಾಡುವೆನೆಂದು ಬುದ್ಧಿಯ ಭ್ರಾಂತಿಯಿಂದ ಸರಿಯಾದ ಜ್ಞಾನೋದಯದ ನೆಲೆಯೇ ಕಾಣಿಸದೆ ತತ್ತ್ವದ ಹಿಂದು ಮುಂದನ್ನು ತಿಳಿಯದೆ, ಮಹಾತ್ಮರು ನಡೆದ ಪಥದಲ್ಲಿ ನಡೆಯದೆ ಜಗತ್ತು ಕೆಡುತ್ತದೆ.

ಅರ್ಥ:
ಒಂದು: ಏಕ; ವಸ್ತು: ಪದಾರ್ಥ; ಎರಡು: ದ್ವಿ, ದ್ವಂದ; ಮಾಡು: ನೆರವೇರಿಸು; ಬುದ್ಧಿ: ಚಿತ್ತ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಮನ: ಮನಸ್ಸು; ಸಂದು: ಸಂದರ್ಭ; ಸಮ್ಯಕ್:ಸರಿಯಾದ; ಜ್ಞಾನ: ವಿದ್ಯೆ; ಉದಯ: ಹುಟ್ಟು; ನೆಲೆ:ನಿವಾಸ; ಕಾಣಿಸು: ತೋರು; ದಂದುಗ: ತೊಡಕು; ತತ್ತ್ವ: ಸಿದ್ಧಾಂತ; ಅರಿ: ತಿಳಿ; ಮಹಾತ್ಮರು: ಶ್ರೇಷ್ಠರು; ಪಥ: ದಾರಿ; ಕಿಡುತಿಹರು: ಕೆಡುಕ ಹೊಂದುತ್ತಿರುವರು; ಜಗ: ಜಗತ್ತು;

ಪದವಿಂಗಡಣೆ:
ಒಂದು +ವಸ್ತುವನ್+ಎರಡು +ಮಾಡುವೆನ್
ಎಂದು +ಬುದ್ಧಿ+ಭ್ರಾಂತಿಯೊಳು +ಮನ
ಸಂದು +ಸಮ್ಯಜ್ಞಾನ+ಉದಯದ +ನೆಲೆಯು +ಕಾಣಿಸದೆ
ದಂದುಗಂ+ಬಡುತಿಹುದು +ತತ್ತ್ವದ
ಹಿಂದು +ಮುಂದ್+ಅರಿಯದೆ +ಮಹಾತ್ಮರು
ಬಂದ +ಪಥದೊಳು +ಬಾರದೇ +ಕಿಡುತಿಹುದು+ ಜಗವೆಂದ

ಅಚ್ಚರಿ:
(೧) ಒಂದು, ಎಂದು, ಸಂದು, ಹಿಂದು – ಪ್ರಾಸ ಪದಗಳು
(೨) ಹಿಂದು ಮುಂದು – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ