ಪದ್ಯ ೧೪: ಯಾವ ಮಾರ್ಗದಲ್ಲಿ ನಡೆವುದು ಶ್ರೇಯಸ್ಸು?

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದಲವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಹಳ ಪುಣ್ಯಕಾರ್ಯಗಳನ್ನು ಮಾಡಿ, ಸ್ವರ್ಗವೇ ಮೊದಲಾದ ಉನ್ನತ ಭೋಗಗಳನ್ನು ಭೋಗಿಸಿದ ಮೇಲೆ ಭೂಮಿಗೆ ಬೀಳುವುದು ತಪ್ಪುವುದಿಲ್ಲ. ಆದುದರಿಂದ ಮರಲಿ ಹುಟ್ಟದ ದಾರಿ ಯಾವುದೆಂಬುದನ್ನು ಅರಿತುಕೊಂಡು ಮಹಾನುಭಾವರಾದ ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆವುಯು ಉಚಿತ.

ಅರ್ಥ:
ಅತಿಶಯ: ಹೆಚ್ಚು, ಅಧಿಕ; ಸುಕೃತ: ಒಳ್ಳೆಯ ಕೆಲಸ; ವಿರಚಿಸಿ: ನಿರ್ಮಿಸಿ; ಗತಿ: ನಡಿಗೆ; ಗತಿವಡೆ: ಸದ್ಗತಿ ಪಡೆ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಉನ್ನತಿ: ಮೇಲ್ಮೆ, ಹಿರಿಮೆ; ಸಮನಂತರ: ಆದಮೇಲೆ; ಅವನಿ: ಭೂಮಿ; ಪತನ: ಬೀಳು; ತಪ್ಪದು: ಮರಳಿ: ಮತ್ತೆ; ಬಾರದ: ಹಿಂದಿರುಗದ; ಅರಿ: ತಿಳಿ; ಮಹಾನುಭವರು: ಶ್ರೇಷ್ಠರು; ಮತ: ಅಭಿಪ್ರಾಯ, ಉದ್ದೇಶ; ನಡೆ: ಹೆಜ್ಜೆ ಹಾಕು; ನಯ:ಸೊಗಸು, ಸೌಜನ್ಯ; ಕೇಳು: ಆಲಿಸು;

ಪದವಿಂಗಡಣೆ:
ಅತಿಶಯದ +ಸುಕೃತವನು +ವಿರಚಿಸಿ
ಗತಿವಡೆದು +ಸ್ವರ್ಗಾದಿ +ಭೋಗ
ಉನ್ನತಿಕೆಯನು +ಭೋಗಿಸಿದ +ಸಮನಂತರದಲ್+ಅವನಿಯಲಿ
ಪತನ +ತಪ್ಪದು +ಮರಳಿ +ಬಾರದ
ಗತಿಯನರಿದು +ಮಹಾನುಭಾವರ
ಮತವಿಡಿದು+ ನಡೆವುದು +ನಯವು +ಕೇಳೆಂದನಾ +ಮುನಿಪ

ಅಚ್ಚರಿ:
(೧) ಅತಿ, ಗತಿ; ಪತ, ಮತ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ