ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ