ಕೆಟ್ಟಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯ ಸಂಸಾರದ ಸುಖಕ್ಕೆಳಸಿ
ಹುಟ್ಟುಸಾವಿನ ವಿಲಗದಲಿ ಕಂ
ಗೆಟ್ಟು ನಾನಾಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೨ ಪದ್ಯ)
ತಾತ್ಪರ್ಯ:
ಇಂದ್ರಿಯಗಳ ಕ್ಷುಲ್ಲಕ ಆಟಗಳಿಗೆ ಬಲಿಯಾಗಿ ದುರ್ಮಾಗದಲ್ಲಿ ನಡೆದು ಶಾಶ್ವತವಲ್ಲದ ಸಂಸಾರ ಸುಖಕ್ಕೆ ಮಾರುಹೋಗಿ ಹುಟ್ಟು ಸಾವುಗಳೆಂಬ ಜಂಜಾಟಕ್ಕೆ ಸಿಲುಕಿ ಹಲವು ಯೋನಿಗಳಲ್ಲಿ ನೋವು ತಿನ್ನುತ್ತಾ ಬಳಲುವುದು ಸರಿಯಾದ ಮಾರ್ಗವೇ ರಾಜ ಎಂದು ಸನತ್ಸುಜಾತರು ಕೇಳುತ್ತಾ ಆತ್ಮಬೋಧನೆ ಮಾಡಿದರು.
ಅರ್ಥ:
ಕೆಟ್ಟ: ದುಷ್ಟ; ಮಾರ್ಗ: ದಾರಿ, ಹಾದಿ; ಇಂದ್ರಿಯ:ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಚಿಟ್ಟು: ಜುಗುಪ್ಸೆ, ಬೇಸರ; ಮುರಿ: ಸೀಳು; ಆಟ: ಕ್ರೀಡೆ; ಮನ: ಮನಸ್ಸು; ಸಂದಷ್ಟ: ಸಂತೋಷ; ನಿತ್ಯ: ಯಾವಾಗಲು; ಅನಿತ್ಯ: ಕ್ಷಣಿಕವಾದುದು; ಸಂಸಾರ: ಹುಟ್ಟು, ಜನ್ಮ; ಸುಖ: ಸಂತೋಷ, ನಲಿವು; ಹುಟ್ಟು: ಜನನ; ಸಾವು: ಮರಣ; ವಿಲಗ:ತೊಂದರೆ, ಕಷ್ಟ; ಕಂಗೆಟ್ಟು: ದಿಕ್ಕು ತೋರದಿರು, ಹತಾಶ; ಬಳಲು: ಆಯಾಸ, ದಣಿವು; ಉಚಿತವೆ: ಸರಿಯೇ, ಔಚಿತ್ಯ; ಭೂಪಾಲ: ರಾಜ; ಕೇಳು: ಆಲಿಸು; ತಟ: ಪ್ರಾಣಬಾಧೆ; ಗುಟ್ಟಿ: ಒಂದು ಗುಟುಕು; ಎಳಸು: ಬಯಸು, ಅಪೇಕ್ಷಿಸು;
ಪದವಿಂಗಡಣೆ:
ಕೆಟ್ಟಮಾರ್ಗದಲ್+ಇಂದ್ರಿಯಂಗಳ
ಚಿಟ್ಟುಮುರಿ+ಯಾಟದಲಿ+ ಮನ+ ಸಂ
ದಷ್ಟ+ವಾಗಿ +ಅನಿತ್ಯ +ಸಂಸಾರದ +ಸುಖಕ್ಕ್+ಎಳಸಿ
ಹುಟ್ಟು+ಸಾವಿನ+ ವಿಲಗದಲಿ +ಕಂ
ಗೆಟ್ಟು +ನಾನಾ+ಯೋನಿಯಲಿ +ತಟ
ಗುಟ್ಟಿ +ಬಳಲುವುದ್+ಉಚಿತವೇ +ಭೂಪಾಲ +ಕೇಳೆಂದ
ಅಚ್ಚರಿ:
(೧) ಹುಟ್ಟು ಸಾವು – ವಿರುದ್ಧ ಪದಗಳು
(೨) ೨, ೪ ಸಾಲುಗಳು ಸಂ, ಕಂ ಅಕ್ಷರಗಳಿಂದ ಕೊನೆಯಾಗಿರುವುದು